ನವದೆಹಲಿ, ನ 16 (DaijiworldNews/DB): ಗುಜರಾತ್ ಎಎಪಿ ಅಭ್ಯರ್ಥಿ ನಿನ್ನೆಯಿಂದ ನಾಪತ್ತೆಯಾಗಿದ್ದು, ಅವರನ್ನು ಬಿಜೆಪಿ ಅಪಹರಣ ಮಾಡಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.
ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ದೆಹಲಿ ಉಪಮಖ್ಯಮಂತ್ರಿ ಮನೀಶ್ ಸಿಸೋಡಿಯಾ, ಸೂರತ್ನಿಂದ (ಪೂರ್ವ) ಎಎಪಿ ಅಭ್ಯರ್ಥಿ ಕಾಂಚನ್ ಜರಿವಾಲಾ ಅವರನ್ನು ಬಿಜೆಪಿ ಅಪಹರಿಸಿದೆ. ನಿನ್ನೆಯಿಂದ ಅವರು ನಾಪತ್ತೆಯಾಗಿದ್ದಾರೆ ಎಂದರು.
ಬಿಜೆಪಿಯವರಿಗೆ ಸೋಲಿನ ಭೀತಿ ಎದುರಾಗಿದೆ. ಈ ಕಾರಣಕ್ಕಾಗಿಯೇ ನಮ್ಮ ಅಭ್ಯರ್ಥಿಯನ್ನು ಅವರು ಅಪಹರಿಸಿ ಬಚ್ಚಿಟ್ಟಿದ್ದಾರೆ. ಇದು ಕೇವಲ ಅಭ್ಯರ್ಥಿಯ ಅಪಹರಣವಲ್ಲ, ಪ್ರಜಾಪ್ರಭುತ್ವವನ್ನೇ ಅಪಹರಣ ಮಾಡಿದಂತೆ. ಇಂತಹ ಬೆಳವಣಿಗೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಪಾಯಕಾರಿಯಾಗಿದೆ ಎಂದವರು ಆತಂಕ ವ್ಯಕ್ತಪಡಿಸಿದರು.
ಇನ್ನು ಎಎಪಿ ಅಭ್ಯರ್ಥಿ ಹಾಗೂ ಅವರ ಕುಟುಂಬ ನಿನ್ನೆಯಿಂದ ನಾಪತ್ತೆಯಾಗಿದೆ. ಬಿಜೆಪಿಯು ಅವರ ನಾಮಪತ್ರ ತಿರಸ್ಕರಿಸಲು ಹಲವು ಪ್ರಯತ್ನ ನಡೆಸಿದರೂ ಅದು ಸಾಧ್ಯವಾಗಲಿಲ್ಲ. ನಾಮಪತ್ರ ಹಿಂತೆಗೆದುಕೊಳ್ಳುವಂತೆಯೂ ಒತ್ತಡ ಹೇರಲಾಗಿತ್ತು. ಹಾಗಾದರೆ ಈಗ ಅವರ ನಾಪತ್ತೆ ಹಿಂದೆ ಅಪಹರಣ ನಡೆದಿದೆಯೇ ಎಂದು ದೆಹಲಿ ಸಿಎಂ ಅರವಿಂದ ಕೇಜ್ರೀವಾಲ್ ಪ್ರಶ್ನಿಸಿದ್ದಾರೆ.