ನವದೆಹಲಿ, ನ 16 (DaijiworldNews/DB): ಇಡೀ ದೇಶದಲ್ಲೇ ಆತಂಕ ಸೃಷ್ಟಿಸಿದ್ದ ಶ್ರದ್ದಾ ವಾಲ್ಕರ್ ಕೊಲೆ ಪ್ರಕರಣದ ಬಗ್ಗೆ ದಿನಕ್ಕೊಂದು ಆತಂಕಕಾರಿ ಮಾಹಿತಿಗಳು ಲಭ್ಯವಾಗುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ ತಾನೊಬ್ಬ ಸಭ್ಯನಂತೆ ಕಾಣಿಸಿಕೊಂಡಿದ್ದ ಆರೋಪಿ ಅಫ್ತಾಬ್ನ ನಿಜಜೀವನದ ಕರಾಳಮುಖ ಬಹಿರಂಗಗೊಳ್ಳುತ್ತಲೇ ಹೋಗುತ್ತಿದೆ.
ಲಿವ್ ಇನ್ ಪ್ರೇಯಸಿ ಶ್ರದ್ದಾ ಮದವೆಯಾಗುವಂತೆ ಒತ್ತಾಯಿಸಿದ್ದಕ್ಕಾಗಿ ಆಕೆಯನ್ನು ಕೊಲೆಗೈದು ದೇಹವನ್ನು 35 ತುಂಡಾಗಿ ಕತ್ತರಿಸಿದ ನರಹಂತಕ ಅಫ್ತಾಬ್ ಅಮೀನ್ ಒಬ್ಬ ವಿಕೃತ ಮನುಷ್ಯನಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ. ಮೂಲತಃ ಮುಂಬೈನ ವಸೈಯವನಾದ ಈತ ಫುಡ್ ಬ್ಲಾಗರ್ ಎನಿಸಿಕೊಂಡು ಇನ್ಸ್ಟಾಗ್ರಾಂನಲ್ಲಿ 28,000 ಅನುಯಾಯಿಗಳನ್ನು ಕೂಡಾ ಹೊಂದಿದ್ದ. ಕಾಲ್ಸೆಂಟರ್ನಲ್ಲಿ ಕೆಲಸ ಮಾಡುತ್ತಲೇ ಇನ್ಸ್ಟಾಗ್ರಾಂ ಖಾತೆಯಲ್ಲಿ ಆಹಾರ ಸಂಬಂಧಿ ಫೋಟೋಗಳು, ರೆಸ್ಟೋರೆಂಟ್ಗಳ ವಿಮರ್ಶೆಗಳನ್ನು ಹಾಕುತ್ತಿದ್ದ. ಇನ್ನು ಬಾಡಿಬಿಲ್ಡಿಂಗ್ ಚಿತ್ರ ಹಾಕಿಕೊಂಡು ಹೆಣ್ಮಕ್ಕಳನ್ನು ಆಕರ್ಷಿಸುತ್ತಿದ್ದ. ಇನ್ಸ್ಟಾಗ್ರಾಂನಲ್ಲಿ ತನ್ನನ್ನು ತಾನು ಪ್ರಾಣಿಪ್ರಿಯನೆಂದು ಬಿಂಬಿಸಿಕೊಂಡಿದ್ದ ನರಹಂತಕ ಫುಟ್ಬಾಲ್ ಅಭಿಮಾನಿಯೆಂದೂ ಚಿತ್ರಗಳನ್ನು ಹಾಕಿಕೊಂಡಿದ್ದ. ಸಾಮಾಜಿಕ ಕಾಳಜಿಯುಳ್ಳ ಪೋಸ್ಟ್ ಹಾಕುತ್ತಿದ್ದ ಈತ ಯುವತಿಯರ ಮೇಲಿನ ದೌರ್ಜನ್ಯ ಖಂಡಿಸಿ ಪೋಸ್ಟ್ ಹಂಚಿಕೊಳ್ಳುತ್ತಿದ್ದ.
ಇದು ಆತನ ಇನ್ಸ್ಟಾಗ್ರಾಮ್ ಕತೆಯಾದರೆ ಡೇಟಿಂಗ್ ಅಪ್ಲಿಕೇಶನ್ನಲ್ಲಿ ಯುವತಿಯರಿಗೆ ಗಾಳ ಹಾಕುವುದನ್ನೇ ರೂಢಿಸಿಕೊಂಡಿದ್ದ. ಹಲವು ಹುಡುಗಿಯರೊಂದಿಗೆ ಆತನ ಸಂಬಂಧ ಇಟ್ಟುಕೊಂಡಿರುವದನ್ನು ತನಿಖೆ ವೇಳೆ ಬಾಯ್ಬಿಟ್ಟಿದ್ದಾನೆ. ಶ್ರದ್ದಾ ಕೊಲೆ ಬಳಿಕ ಬಂಬ್ಲ್ ಎಂಬ ಡೇಟಿಂಗ್ ಅಪ್ಲಿಕೇಶನ್ ಮುಖಾಂತರ ಹಲವು ಯುವತಿಯರಿಗೆ ಗಾಳ ಹಾಕಿದ್ದು, ಅವರ ಪರಿಚಯ ಮಾಡಿಕೊಂಡು ನಂಬಿಕೆ ಗಳಿಸಿಕೊಂಡು, ಕೆಲವು ಬಾರಿ ಭೇಟಿಯಾಗಿ ಬಳಿಕ ತಾನಿರುವಲ್ಲಿಗೆ ಕರೆಸಿಕೊಳ್ಳುತ್ತಿದ್ದ. ಶ್ರದ್ದಾಳ ದೇಹವನ್ನು ತುಂಡು ಮಾಡಿ ಫ್ರಿಡ್ಜ್ನಲ್ಲಿಟ್ಟುಕೊಂಡೇ ಯುವತಿಯೊಬ್ಬಳನ್ನು ಅಪಾರ್ಟ್ಮೆಂಟ್ಗೆ ಕರೆಸಿ ಆಕೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದ ಎಂದು ಪೊಲೀಸರ ತನಿಖೆಯಲ್ಲಿ ಹೇಳಿಕೊಂಡಿದ್ದಾನೆ.
ಈತನ ನಡವಳಿಕೆಯಿಂದ ಸಂಶಯಗೊಂಡಿದ್ದ ಶ್ರದ್ದಾ ಮದುವೆಯಾಗುವಂತೆ ಹಠ ಹಿಡಿದಿದ್ದು, ಆದರೆ ಆತ ಅದಕ್ಕೆ ಒಪ್ಪಿದಿದ್ದಾಗ ಆತನನ್ನು ಟ್ರೇಸ್ ಮಾಡಲಾರಂಭಿಸಿದ್ದಳು. ಈ ಕಾರಣಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ. ಇನ್ನು ಶ್ರದ್ದಾ ಕೊಲೆ ಬಳಿಕ ಕೆಲವು ಯುವತಿಯರು ಆತನೊಂದಿಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಯುವತಿಯರ ಇರುವಿಕೆಯ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೆಹ್ರೌಲಿ ಸುತ್ತಲಿನ ನಾಪತ್ತೆಯಾದ ಯುವತಿಯರ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಲವ್ ಜಿಹಾದ್ ಪ್ರಕರಣ?
ಶ್ರದ್ದಾ ಹಂತಕ ಅಫ್ತಾಬ್ ಅಮೀನ್ ಎಂಬ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಈ ಪ್ರಕರಣವು ಲವ್ ಜಿಹಾದ್ ಬಣ್ಣ ಪಡೆದುಕೊಂಡಿದೆ. ಆದರೆ ಈ ಬಗ್ಗೆ ಪೊಲೀಸರು ಯಾವುದೇ ಮಾಹಿತಿ ನೀಡಿಲ್ಲ. ಅಲ್ತಾ ಬಲೆಗೆ ಬಿದ್ದವರಲ್ಲಿ ಕೇವಲ ಹಿಂದೂ ಯುವತಿಯರು ಮಾತ್ರವೇ ಅಥವಾ ಇತರ ಧರ್ಮದವರೂ ಇದ್ದಾರೆಯೇ ಎಂಬ ಕೋನದಲ್ಲಿಯೂ ತನಿಖೆ ನಡೆಯುತ್ತಿದೆ. ಇನ್ನು ಈತ ಮುಸ್ಲಿ ಅಲ್ಲ, ಪಾರ್ಸಿ ಧರ್ಮಕ್ಕೆ ಸೇರಿದವನು ಎಂದೂ ಹೇಳಲಾಗುತ್ತಿದೆ. ಆದರೆ ಎಫ್ಐಆರ್ ಪ್ರತಿಯಲ್ಲಿ ಆತ ಮತ್ತು ಆತನ ಹೆತ್ತವರು ಮುಸ್ಲಿಂ ಧರ್ಮಕ್ಕೆ ಸೇರಿದವರು ಎಂಬ ಉಲ್ಲೇಖವಾಗಿದೆ. ತನಿಖೆ ಬಳಿಕ ಇದು ಲವ್ ಜಿಹಾದ್ ಹೌದೋ ಅಲ್ಲವೋ ಎಂಬುದು ತಿಳಿದು ಬರಲಿದೆ.