ಗುರುಗ್ರಾಮ್, ನ 16 (DaijiworldNews/DB): ಸಾಕು ನಾಯಿ ದಾಳಿಗೊಳಗಾಗಿ ಗಾಯಗೊಂಡ ಮಹಿಳೆಗೆ 2 ಲಕ್ಷ ರೂಪಾಯಿ ಮಧ್ಯಂತರ ಪರಿಹಾರ ನೀಡುವಂತೆ ಗುರುಗ್ರಾಮ್ ಮಹಾನಗರ ಪಾಲಿಕೆಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಮಂಗಳವಾರ ಆದೇಶಿಸಿದೆ. ಪರಿಹಾರದ ಮೊತ್ತವನ್ನು ನಾಯಿ ಮಾಲೀಕರಿಂದ ವಸೂಲಿ ಮಾಡಲು ಅವಕಾಶವಿದೆ ಎಂದು ವೇದಿಕೆ ತಿಳಿಸಿದೆ.
ನಾಯಿಯ ಮಾಲಿಕರು ಕಾನೂನನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ. ನಿಷೇಧಿತ ತಳಿಯ ನಾಯಿಯನ್ನು ಸಾಕಿರುವುದರಿಂದ ಇದು ನಿಯಮ ಉಲ್ಲಂಘನೆಯಾಗುತ್ತದೆ. ಹೀಗಾಗಿ ಮನೆಗೆಲಸ ಮಾಡಿಕೊಂಡಿದ್ದ ಬಡ ಮಹಿಳೆಗೆ ಮಧ್ಯಂತರ ಪರಿಹಾರವಾಗಿ ಎಂಸಿಜಿಯಿಂದ ಎರಡು ಲಕ್ಷ ರೂ. ಪರಿಹಾರ ನೀಡಬೇಕು. ಎಂಸಿಜಿ ಬಯಸಿದ್ದಲ್ಲಿ ಪರಿಹಾರದ ಮೊತ್ತವನ್ನು ನಾಯಿಯ ಮಾಲಕರಿಂದ ವಸೂಲಿ ಮಾಡಿಕೊಳ್ಳಬಹುದು ಎಂದು ನಿರ್ದೇಶಿಸಿದೆ.
ಕಳೆದ ಆಗಸ್ಟ್ 11ರಂದು ಮಹಿಳೆ ತನ್ನ ಸಂಬಂಧಿಯೊಂದಿಗೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ ನೆರೆಮನೆಯ ಸಾಕು ನಾಯಿ ಆಕೆ ಮೇಲೆ ದಾಳಿ ಮಾಡಿತ್ತು. ಇದರಿಂದ ಆಕೆಯ ಮುಖ, ದೇಹದ ಇತರ ಭಾಗಗಳಿಗೆ ಗಂಭೀರ ಗಾಯವಾಗಿ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲದೆ ಸಿವಿಲ್ ಲೈನ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಲಾಗಿತ್ತು. ಇನ್ನು ಘಟನೆ ನಡೆದ ಬಳಿಕ ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯು, ಮೂರು ತಿಂಗಳೊಳಗೆ ಸಾಕು ನಾಯಿಗಳಿಗೆ ನೀತಿ ರೂಪಿಸುವಂತೆ ಎಂಸಿಜಿಗೆ ಸೂಚಿಸಿತ್ತು.