ಮೈಸೂರು,ನ 16 (DaijiworldNews/MS): ಮೈಸೂರಿನಲ್ಲಿ ಗುಂಬಜ್ ಮಾದರಿ ಬಸ್ ನಿಲ್ದಾಣ ನಿರ್ಮಾಣದ ವಿಚಾರ ವಿವಾದ ಸ್ವರೂಪ ಪಡೆದಿದೆ. ಸಂಸದ ಪ್ರತಾಪ್ ಸಿಂಹ ತಂಗುದಾಣ ಮಸೀದಿ ವಿನ್ಯಾಸದಲ್ಲಿದೆ ಅದನ್ನು ಒಡೆದುಹಾಕಲಾಗುವುವುದು ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ತಂಗುದಾಣದ ಕುರಿತು ಸ್ಪಷ್ಟನೆ ನೀಡಿದ್ದಾರೆ. ಆದರೆ ಮೈಸೂರಿನ ಬಿಜೆಪಿ ಮುಖಂಡರಾದ ಪ್ರತಾಪ್ ಸಿಂದ ಮತ್ತು ರಾಮ್ ದಾಸ್ ಅವರ ನಡುವಿನ ಒಳಸಮರ ಗುಂಬಜ್ ಮಾದರಿ ಬಸ್ ನಿಲ್ದಾಣದ ನೆಪದಲ್ಲಿ ಮತ್ತೆ ಸ್ಫೋಟಗೊಂಡಿದೆಯೇ ಎನ್ನುವ ಅನುಮಾನ ಕಾಡತೊಡಗಿದೆ.
ಗುಂಬಜ್ ತಂಗುದಾಣ ವಿವಾದ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಪ್ರಕಟಣೆ ನೀಡಿರುವ ರಾಮದಾಸ್ ಅವರು, ಮೈಸೂರು ಪಾರಂಪರಿಕ ನಗರ. ಇದರ ಮಹತ್ವ ಸಾರುವ ದೃಷ್ಟಿಯಿಂದ ಬಸ್ ತಂಗುದಾಣ ನಿರ್ಮಿಸಲಾಗುತ್ತಿದೆ ಹೊರತು ಯಾವುದೇ ಧರ್ಮದ ಆಧಾರದ ಮೇಲೆ ಅಲ್ಲ.ಈವಿನ್ಯಾಸವನ್ನು ತಪ್ಪಾಗಿ ಅರ್ಥೈಸಿಕೊಂಡು ಮಸೀದಿಯಂತೆ ನಿರ್ಮಿಸಲಾಗುತ್ತಿದೆ ಹಾಗೂ ಗುತ್ತಿಗೆದಾರ ಮುಸ್ಲಿಂ ಎಂದೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಹಬ್ಬಿಸುವ ಹುನ್ನಾರ ಗಮನಕ್ಕೆ ಬಂದ ಕೂಡಲೇ ಸೂಕ್ತ ಕ್ರಮಕ್ಕಾಗಿ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ದೂರು ನೀಡಿದ್ದೇನೆ ಎಂದು ಹೇಳಿದ್ದಾರೆ.
ನಗರದಲ್ಲಿ ಈಗಾಗಲೇ ಹಲವೆಡೆ ಇದೇ ಮಾದರಿಯ ಬಸ್ ನಿಲ್ದಾಣಗಳಿವೆ. ಸಂಸದ ಪ್ರತಾಪ ಸಿಂಹ ಹೇಳಿಕೆ ನಂತರ ರಾತ್ರೋರಾತ್ರಿ ಕಳಶ ಅಳವಡಿಸಿಲ್ಲ. ಕಳೆದ ವಾರವೇ ಕಳಶ ಹಾಕಲಾಗಿದೆ. ಮಹದೇವ್ ಎಂಬ ಗುತ್ತಿಗೆದಾರ ಇದನ್ನು ನಿರ್ಮಿಸುತ್ತಿದ್ದಾರೆ. ತಂಗುದಾಣದಲ್ಲಿ ಎಲ್ಇಡಿ ಪರದೆ ಅಳವಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನೂ ತಿಳಿಸಲಾಗುವುದು. ಕಾಮಗಾರಿ ಇನ್ನು ಪ್ರಗತಿಯಲ್ಲಿದ್ದು ಪೂರ್ಣಗೊಂಡಿಲ್ಲ ಎಂದು ರಾಮದಾಸ್ ಸ್ಪಷ್ಟಪಡಿಸಿದ್ದಾರೆ.
ಆದರೆ ಸ್ಥಳೀಯರ ಪ್ರಕಾರ ಅಕ್ಟೋಬರ್ನಲ್ಲಿ ನಿಲ್ದಾಣದ ಕಾಮಗಾರಿ ಮುಗಿದಿದ್ದು, ಇನ್ನೂ ಅಧಿಕೃತವಾಗಿ ಉದ್ಘಾಟನೆಯಾಗಿಲ್ಲ. ಆದರೆ ಈ ವಿವಾದದ ಸುತ್ತ ಬೇರೆಯೇ ಒಳಜಗಳದ ರಾಜಕೀಯ ಕೆಲಸ ಮಾಡುತ್ತಿದೆ. ಮೈಸೂರು ಭಾಗದ ಬಿಜೆಪಿಯೊಳಗಿನ ನಾಯಕತ್ವ ಸಮರವೇ ಈ ವಿವಾದದ ಕೇಂದ್ರಬಿಂದು ಎನ್ನಲಾಗುತ್ತಿದೆ.