ನವದೆಹಲಿ, ನ 15 (DaijiworldNews/DB): ಮಗಳನ್ನು ಭೀಕರವಾಗಿ ಹತ್ಯೆಗೈದ ಅಫ್ತಾಬ್ಗೆ ಮರಣದಂಡನೆ ವಿಧಿಸಬೇಕೆಂದು ಶ್ರದ್ಧಾ ವಾಕರ್ ಅವರ ತಂದೆ ವಿಕಾಸ್ ವಾಕರ್ ಒತ್ತಾಯಿಸಿದ್ದಾರೆ. ಅಲ್ಲದೆ ಇದೊಂದು ಲವ್ ಜಿಹಾದ್ ಎಂದವರು ಶಂಕೆ ವ್ಯಕ್ತಪಡಿಸಿದ್ದಾರೆ.
ಸುದ್ದಿಸಂಸ್ಥೆಯೊಂದರ ಜೊತೆ ಮಾತನಾಡಿದ ಅವರು, ಲವ್ ಜಿಹಾದ್ ಜೈವಾಡ ನನ್ನ ಮಗಳ ಸಾವಿನಲ್ಲಿ ಇದೆ. ಆತನಿಗೆ ಮರಣದಂಡನೆಯೇ ಸರಿಯಾದ ಶಿಕ್ಷೆ. ದೆಹಲಿ ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆಂದು ನಾನು ಭಾವಿಸುತ್ತೇನೆ ಎಂದರು.
ಫುಡ್ ಬ್ಲಾಗ್ ಕಾಲ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದ ಅಫ್ತಾಬ್ನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದು, ಬಿರುಸಿನ ತನಿಖೆ ನಡೆಸುತ್ತಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, 2019ರಿಂದ ಶ್ರದ್ದಾ ಮತ್ತು ಅಲ್ತಾಫ್ ಸಂಬಂಧ ಹೊಂದಿದ್ದರು. ಕೆಲ ಸಮಯ ಮಹಾರಾಷ್ಟ್ರದಲ್ಲಿ ಕಳೆದಿದ್ದ ಅವರು ಬಳಿಕ ವಿವಿಧ ಸ್ಥಳಗಳಿಗೆ ತೆರಳಿದ್ದರು. 2022ರಲ್ಲಿ ದೆಹಲಿಗೆ ಸ್ಥಳಾಂತರಗೊಂಡಿದ್ದರು. ಮೇ ತಿಂಗಳಲ್ಲಿ ಹಿಮಾಚಲ ಪ್ರದೇಶಕ್ಕೆ ಜೊತೆಯಾಗಿ ಪ್ರವಾಸ ಹೋಗಿದ್ದರು. ಅಲ್ಲಿ ವ್ಯಕ್ತಿಯೊಬ್ಬನ ಪರಿಚಯವಾಗಿ ಆತನಿಗೆ ಸೇರಿದ ದೆಹಲಿ ಫ್ಲಾಟ್ನಲ್ಲಿ ಇಬ್ಬರೂ ವಾಸವಾಗಿದ್ದರು. ಅಲ್ಲಿಯೂ ಇಬ್ಬರ ನಡುವೆ ಗಲಾಟೆ ಮುಂದುವರಿದಿದ್ದು, ಛತ್ತರ್ಪುರದ ಫ್ಲಾಟ್ಗೆ ವಾಸ ಬದಲಾಯಿಸಿಕೊಂಡಿದ್ದರು. ಅಲ್ಲಿ ಮೇ 18 ರಂದು ಶ್ರದ್ದಾಳನ್ನು ಅಫ್ತಾಬ್ ಕತ್ತು ಹಿಸುಕಿ ಕೊಲೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಆಕೆಯನ್ನು ಕೊಲೆಗೈಯಲೆಂದೇ ಆರೋಪಿ ಫ್ಲಾಟ್ ಬಾಡಿಗೆಗೆ ಪಡೆದಿದ್ದನಾ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.