ಉತ್ತರಪ್ರದೇಶ, ನ 15 (DaijiworldNews/HR): ಪತಿಯನ್ನು ಕೊಂದು ಮನೆಯೊಳಗೆ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ವರ್ಷಗಳ ಬಳಿಕ ಪತ್ನಿಯನ್ನು ಉತ್ತರಪ್ರದೇಶದ ಗಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ.
2018ರ ಸೆಪ್ಟೆಂಬರ್ 28ರಿಂದ ಸಿಕ್ರೋಡ್ ಗ್ರಾಮದ ನಿವಾಸಿ ಚಂದ್ರವೀರ್ ಎಂಬಾತ ನಾಪತ್ತೆಯಾಗಿದ್ದು, ಈ ಬಗ್ಗೆ ಸಿಹಾನಿ ಗೇಟ್ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣವನ್ನು ಕ್ಲೋಸ್ ಮಾಡಿದ್ದರು. ಆದರೆ ಪೊಲೀಸರಿಗೆ ದೊರೆತ ಮಾಹಿತಿ ಆಧಾರದ ಮೇಲೆ ಪ್ರಕರಣದ ತನಿಖೆಯನ್ನು ಪುನರಾರಂಭಿಸಿದ್ದರು.
ಇನ್ನು ಚಂದ್ರವೀರ್ ಪತ್ನಿ ಸವಿತಾ ವಿವಾಹಕ್ಕೂ ಮುನ್ನವೇ ಅರುಣ್ ಅಲಿಯಾಸ್ ಅನಿಲ್ ಕುಮಾರ್ ಎಂಬಾತನ ಜತೆ ಅನೈತಿಕ ಸಂಬಂಧ ಹೊಂದಿದ್ದಳು. ಅಷ್ಟೇ ಅಲ್ಲ ವಿವಾಹದ ನಂತರವೂ ಸವಿತಾ, ಅರುಣ್ ದೈಹಿಕ ಸಂಬಂಧ ಮುಂದುವರಿದಿದ್ದು, ಇಬ್ಬರೂ ರೆಡ್ ಹ್ಯಾಂಡ್ ಆಗಿ ಪತಿ ಚಂದ್ರವೀರ್ ಕೈಗೆ ಸಿಕ್ಕಿಬಿದ್ದಿದ್ದು, ಇದರಿಂದ ಕೋಪಗೊಂಡಿದ್ದ ಚಂದ್ರವೀರ್ ಪತ್ನಿಗೆ ಹಿಗ್ಗಾಮುಗ್ಗಾ ಹೊಡೆಯುತ್ತಿದ್ದ ಎನ್ನಲಾಗಿದೆ.
ಇದರಿಂದ ಕೋಪಗೊಂಡಿದ್ದ ಸವಿತಾ 2018ರ ಸೆಪ್ಟೆಂಬರ್ 8ರಂದು ಚಂದ್ರವೀರ್ ಕುಡಿದು ಮನೆಗೆ ಬಂದಿದ್ದಾಗ ಈತ ಮಲಗಿದ್ದನ್ನು ಗಮನಿಸಿದ ಪತ್ನಿ ಪ್ರಿಯತಮ ಅರುಣ್ ಗೆ ಕರೆ ಮಾಡಿ ಮನೆಗೆ ಕರೆಯಿಸಿಕೊಂಡಿದ್ದಳು. ನಂತರ ದೇಶೀ ನಿರ್ಮಿತ ಪಿಸ್ತೂಲ್ ನಿಂದ ಪತಿಯ ಹಣೆಗೆ ಗುಂಡಿಟ್ಟು ಹತ್ಯೆಗೈದಿದ್ದಳು.
ಪತಿಯನ್ನು ಕೊಂದು, ಪ್ರಿಯಕರ ಅರುಣ್ ಸಹಾಯದಿಂದ ಮನೆಯೊಳಗೆ ಆರು ಅಡಿ ಆಳದ ಗುಂಡಿ ತೋಡಿ ಶವವನ್ನು ಹೂತು ಹಾಕಿದ್ದು, ಇದೀಗ ನಾಲ್ಕು ವರ್ಷದ ಬಳಿಕ ಪ್ರಕರಣದ ಮರುತನಿಖೆಯಲ್ಲಿ ಇಬ್ಬರನ್ನೂ ಬಂಧಿಸಲಾಗಿದೆ.