ನವದೆಹಲಿ, ನ 15 (DaijiworldNews/DB): ಇಡೀ ದೇಶದಲ್ಲೇ ಆತಂಕ ಸೃಷ್ಟಿಸಿದ್ದ ಶ್ರದ್ಧಾ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರೆದುರು ಆರೋಪಿಯು ಹಲವು ಕರಾಳ ಸತ್ಯಗಳನ್ನು ಬಾಯ್ಬಿಟ್ಟಿದ್ದಾನೆ. ಶ್ರದ್ದಾ ಜೀವಂತವಾಗಿರುವುದನ್ನು ಬಿಂಬಿಸಲು ಆಕೆಯ ಇನ್ಸ್ಟಾಗ್ರಾಂ ಖಾತೆಯನ್ನು ತಾನೇ ಬಳಸುತ್ತಿದ್ದ. ಅಲ್ಲದೆ ಆಕೆಯನ್ನು ಕೊಲೆಗೈದ ಬಳಿಕ ಇನ್ನೊಬ್ಬ ಮಹಿಳೆಯನ್ನು ಅದೇ ಫ್ಲಾಟ್ಗೆ ಕರೆ ತಂದಿದ್ದ ಎಂದು ತಿಳಿದು ಬಂದಿದೆ.
ಶ್ರದ್ದಾಳನ್ನು ಕೊಲೆಗೈದ ಚತ್ತಾರ್ಪುರದ ಫ್ಲಾಟ್ ಹಾಗೂ ಆಕೆಯ ದೇಹವನ್ನು ತುಂಡರಿಸಿ ಬಿಸಾಡಿದ್ದ ಮಹ್ರೂಲಿ ಅರಣ್ಯ ಪ್ರದೇಶದಲ್ಲಿ ಸ್ಥಳ ಮಹಜರಿಗಾಗಿ ಕೊಲೆ ಪ್ರಕರಣದ ಆರೋಪಿ ಆಫ್ತಾಬ್ ಅಮಿನ್ ಪೂನವಾಲಾನನ್ನು ಪೊಲೀಸರು ಕರೆದೊಯ್ದಿದ್ದಾರೆ. ಆರೋಪಿಯು ಅರಣ್ಯದಲ್ಲಿ ಆಕೆಯ ಫೋನ್ನ್ನು ಹೂತಿದ್ದ. ಕೊನೆಯ ಲೊಕೇಶನ್ ಪತ್ತೆಯಾದ ಬಳಿಕ ಆ ಫೋನ್ನ್ನು ಮರಳಿ ಪಡೆಯಲಾಗಿದೆ. ಇನ್ನು ಆರೋಪಿ ಕೊಲೆಗೈದ ಬಳಿಕ ಮುಂದೇನು ಎಂಬುದನ್ನು ಗೂಗಲ್ನಲ್ಲಿ ಹುಡುಕಿದ್ದ. ತುಂಡರಿಸಲು ಬಳಸಿದ್ದ ಆಯುಧಕ್ಕಾಗಿ ಪೊಲೀಸರು ಹುಡುಕಾಡಿದ್ದಾರೆ. ಇನ್ನು ಆಕೆ ಜೀವಂತವಾಗಿದ್ದಾಳೆಂದು ಬಿಂಬಿಸಲು ಆಕೆಯ ಇನ್ಸ್ಟಾಗ್ರಾಂ ಖಾತೆಯನ್ನು ಆರೋಪಿಯೇ ಬಳಕೆ ಮಾಡುತ್ತಿದ್ದ. ಕಳೆದ ಜೂನ್ವರೆಗೂ ಖಾತೆ ಸಕ್ರಿಯವಾಗಿತ್ತು ಎಂದು ತಿಳಿದು ಬಂದಿದೆ. ಶ್ರದ್ದಾಳ ಕೊಲೆಗೈದ ಬಳಿಕ ಆಕೆಯ ಕ್ರೆಡಿಟ್ ಕಾರ್ಡ್ ಬಿಲ್ಗಳನ್ನೂ ಈತನೇ ಪಾವತಿ ಮಾಡಿದ್ದ. ಕೊಲೆಗೈದ ಬಳಿಕ ಸಾಕ್ಷ್ಯ ಯಾವುದೂ ಸಿಗದ ಹಿನ್ನೆಲೆಯಲ್ಲಿ ಮೂಳೆಯ ಕೆಲವು ಚೂರುಗಳನ್ನೇ ವಶಪಡಿಸಿಕೊಂಡು ಪೊಲೀಸರು ಡಿಎನ್ಎ ಪರೀಕ್ಷೆ ಮಾಡಲು ತಯಾರಾಗಿದ್ದಾಳೆ.
ಇನ್ನು ನರಹಂತಕ ಅಫ್ತಾಬ್ ಶ್ರದ್ದಾಳನ್ನು ಕೊಲೆಗೈದು ಫ್ರಿಡ್ಜ್ನಲ್ಲಿ ದೇಹದ ತುಂಡುಗಳನ್ನು ಇಟ್ಟುಕೊಂಡದ್ದಲ್ಲದೆ, ಇದೇ ವೇಳೆ ಇನ್ನೊಬ್ಬ ಮಹಿಳೆಯನ್ನು ಫ್ಲಾಟ್ಗೆ ಕರೆ ತಂದು ಆಕೆಯೊಂದಿಗೆ ರೊಮ್ಯಾನ್ಸ್ ಮಾಡುತ್ತಿದ್ದ ಎಂಬ ಸತ್ಯವೂ ಬಯಲಾಗಿದೆ. ಶ್ರದ್ದಾಳನ್ನು ಕೊಲೆ ಮಾಡಿದ ಬಳಿಕ ಬಂಬ್ಲ್ ಎಂಬ ಡೇಟಿಂಗ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಮಹಿಳೆಯೊಬ್ಬಳೊಂದಿಗೆ ಆತ ಸಂಬಂಧ ಬೆಳೆಸಿದ್ದ. ಅಲ್ಲದೆ ಆಕೆಯನ್ನು ಫ್ಲಾಟ್ಗೆ ಕರೆ ತಂದು ಆಕೆಯೊಂದಿಗೆ ನಿಕಟವಾಗಿದ್ದ. ದುದಾದೃಷ್ಟವೆಂದರೆ ಶ್ರದ್ದಾಳನ್ನೂ ಇದೇ ಅಪ್ಲಿಕೇಶನ್ ಮುಖಾಂತರ ಆತ ಪರಿಚಯ ಮಾಡಿಕೊಂಡಿದ್ದ ಎಂಬುದಾಗಿ ಪೊಲೀಸರೆದುರು ಹೇಳಿಕೊಂಡಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಅಮೆರಿಕದ ಕ್ರೈಂ ಸರಣಿ 'ಡೆಕ್ಸ್ಟರ್'ನಿಂದ ದುಷ್ಪ್ರೇರಣೆ ಪಡೆದಿದ್ದ ಅಫ್ತಾಬ್, ಕೊಲೆಗೈಯುವ ಮೊದಲು ಸಾಕಷ್ಟು ಸಂಶೋಧನೆಗಳನ್ನೂ ನಡೆಸಿದ್ದನಂತೆ. ಈತ ಇನ್ನೂ ಮೂರ್ನಾಲ್ಕು ಹುಡುಗಿಯರಿಗೆ ಮೋಸ ಮಾಡಿದ್ದು, ಅವರೆಲ್ಲರು ಬದುಕಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಿ ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹರಿದಾಡುತ್ತಿದೆ ಎನ್ನಲಾಗಿದೆ.