ಕುರುಕ್ಷೇತ್ರ(ಹರಿಯಾಣ), ನ 15 (DaijiworldNews/DB): ಕುರುಕ್ಷೇತ್ರದ ಪಂಚಾಯತ್ ಸರಪಂಚ್ ಚುನಾವಣೆಯಲ್ಲಿ ಮೃತ ಅಭ್ಯರ್ಥಿ ಅತ್ಯಧಿಕ ಮತಗಳೊಂದಿಗೆ ಗೆದ್ದಿದ್ದಾರೆ!
ಚುನಾವಣೆಗೆ ಒಂದು ವಾರವಿರುವಾಗ ಅನಾರೋಗ್ಯದಿಂದ ಮೃತಪಟ್ಟ ಸರಪಂಚ್ ಅಭ್ಯರ್ಥಿ ರಾಜ್ಬೀರ್ ಸಿಂಗ್ ಅವರೇ ಭರ್ಜರಿ ಮತಗಳಿಂದ ಗೆಲುವು ಸಾಧಿಸಿದವರು. ಹರಿಯಾಣದಲ್ಲಿ 2ನೇ ಹಂತದ ಪಂಚಾಯತ್ ಚುನಾವಣೆ ನವೆಂಬರ್ 12ರಂದು ನಡೆದಿದ್ದು,ಶಹಬಾದ್ ಜಂದೇಡಿ ಗ್ರಾಮದ ಸರಪಂಚ್ ಚುನಾವಣೆಗೆ ರಾಜ್ಬೀರ್ ಅವರು ಸ್ಪರ್ಧಿಸಿದ್ದರು. ಪ್ರಚಾರ ಕಾರ್ಯವನ್ನೂ ಕೈಗೊಂಡಿದ್ದರು. ಆದರೆ ಮತದಾನದ ಒಂದು ವಾರದ ಮೊದಲು ಮೆದುಳಿನ ರಕ್ತದ್ರಾವದಿಂದಾಗಿ ಅವರು ಮೃತಪಟ್ಟರು.
ಇನ್ನು ನವೆಂಬರ್ 12ರಂದು ನಡೆದ ಚುನಾವಣೆಯಲ್ಲಿ ಜನ ರಾಜ್ಬೀರ್ ಅವರ ಪರವಾಗಿ ಮತ ಚಲಾಯಿಸಿ ಅವರನ್ನು ಗೆಲ್ಲಿಸಿದ್ದಾರೆ. ಆ ಮೂಲಕ ಅಕಾಲಿಕ ಸಾವನ್ನಪ್ಪಿದ ರಾಜ್ಬೀರ್ ಅವರಿಗೆ ಗೌರವ ಸಲ್ಲಿಸಿದ್ದಾರೆ. ಮೃತ ಅಭ್ಯರ್ಥಿಗೆ ಅತ್ಯಧಿಕ ಮತ ಲಭಿಸಿ ಅವರು ಜಯಶಾಲಿಯಾಗಿರುವುದರಿಂದ ಈ ವರದಿಯನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ. ಇನ್ನು ಆರು ತಿಂಗಳಲ್ಲಿ ಮತ್ತೆ ಚುನಾವಣೆ ನಡೆಯಲಿದೆ ಎಂದು ಡಿಡಿಪಿಒ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ರಾಜ್ಬೀರ್ ಮಕ್ಕಳು ಅಪ್ರಾಪ್ತರಾಗಿರುವುದರಿಂದ ಅವರ ಪತ್ನಿಯನ್ನು ಸರಪಂಚ್ ಸ್ಥಾನಕ್ಕೆ ಚುನಾವಣೆಗೆ ನಿಲ್ಲಿಸಿ ಅವರನ್ನು ಸರಪಂಚ್ ಮಾಡಬೇಕೆಂಬುದು ಗ್ರಾಮಸ್ಥರ ಒತ್ತಾಯವಾಗಿದೆ.