ಹಿಂಗೋಲಿ, ನ 15 (DaijiworldNews/DB): ನಮಗೆ ಮೇಡ್ ಇನ್ ಇಂಡಿಯಾ ಬೇಕೇ ಹೊರತು ಮೇಡ್ ಇನ್ ಚೈನಾ ಅಲ್ಲ. ರೈತರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಮೋದಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಹಿಂಗೋಲಿಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕ್ಯಾಮರಾ, ಮೊಬೈಲ್, ಬಟ್ಟೆ ಎಲ್ಲವೂ ಚೀನಾದಿಂದ ನಮ್ಮ ದೇಶಕ್ಕೆ ಆಮದಾಗುತ್ತಿದೆ. ಇದರಿಂದ ಅಲ್ಲಿನ ರಫ್ತುದಾರರು ಬೆಳೆಯುತ್ತಿದ್ದಾರೆ. ನಮ್ಮ ಉತ್ಪಾದಕರು ಸಮಸ್ಯೆ ಸುಳಿಯಲ್ಲಿ ಸಿಲುಕುತ್ತಿದ್ದಾರೆ. ನಮಗೆ ಮೇಡ್ ಇನ್ ಚೈನಾ ಉತ್ಪನ್ನಗಳ ಅಗತ್ಯವಿಲ್ಲ. ಮೇಡ್ ಇನ್ ಇಂಡಿಯಾ, ಮೇಡ್ ಇನ್ ಮಹಾರಾಷ್ಟ್ರ, ನಾಸಿಕ್, ಹಿಂಗೋಲಿ ಬೇಕು ಎಂದರು.
ರೈತರ ಸಮಸ್ಯೆಗಳನ್ನು ಮೋದಿ ಸಂಪೂರ್ಣ ಅವಗಣನೆ ಮಾಡಿದ್ದಾರೆ. ನೀಡಿದ ಭರವಸೆಗೆ ತಕ್ಕಂತೆ ಪರಿಹಾರ ಒದಗಿಸುವ ಕಾರ್ಯವನ್ನು ಮಾಡುತ್ತಿಲ್ಲ. ಈಗ ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದರು.
ಅಕಾಲಿಕ ಮಳೆ ಮತ್ತಿತರ ಸಮಸ್ಯೆಗಳಿಂದ ರೈತರ ಭೂಮಿ ನಾಶಗೊಂಡಲ್ಲಿ ಬಿಮಾ ಯೋಜನೆ ಮುಖಾಂತರ ಪರಿಹಾರ ನೀಡಲಾಗುವುದು ಎಂದ ಬಿಜೆಪಿ ಇಲ್ಲಿವರೆಗೆ ಅಂತಹ ರೈತರಿಗೆ ಯಾವುದೇ ಪರಿಹಾರ ಒದಗಿಸಿಲ್ಲ. ಭರವಸೆಗಳನ್ನು ನೀಡುವುದಕ್ಕಷ್ಟೇ ಈ ಸರ್ಕಾರ ಇದೆ, ಈಡೇರಿಸುವುದಕ್ಕಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶ್ರಮ ಹಾಕಿ ಬೆಳೆದ ಉತ್ಪನ್ನಗಳಿಗೆ ಸೂಕ್ತ ದರ ಒದಗಿಸುತ್ತಿಲ್ಲ. ರಫ್ತು ಕೂಡ ನಿಲ್ಲಿಸಲಾಗಿದೆ. ಆತ್ಮಹತ್ಯೆಗೆ ಶರಣಾದ ರೈತ ಕುಟುಂಬಗಳಿಗೆ ಚಿಕ್ಕಾಸೂ ನೀಡುತ್ತಿಲ್ಲ ಎಂದರು.