ಮಿಜೋರಾಂ, ನ 14 (DaijiworldNews/MS): ಮಿಜೋರಾಂನಲ್ಲಿ ಸೋಮವಾರ ಕಲ್ಲು ಕ್ವಾರಿಯೊಂದು ಅವಘಡದ ಸಿಲುಕಿದ್ದ ಬಿಹಾರದ ಎಂಟು ಕಾರ್ಮಿಕರ ಮೃತದೇಹಗಳು ಮಂಗಳವಾರ ಪತ್ತೆಯಾಗಿದ್ದು, ಇನ್ನೂ ನಾಲ್ವರು ಕಾರ್ಮಿಕರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಮರಣೋತ್ತರ ಪರೀಕ್ಷೆ ನಂತರ ಮೃತದೇಹಗಳ ಗುರುತು ಪತ್ತೆ ಹಚ್ಚಲಾಗುವುದು. ಶೋಧ ಕಾರ್ಯಾಚರಣೆ ಇನ್ನೂ ಮುಂದುವರೆದಿದ್ದು, ಕಾಣೆಯಾದವರೆಲ್ಲ ಪತ್ತೆಯಾಗುವವರೆಗೂ ಮುಂದುವರೆಯಲಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹೇಳಿಕೆಯಲ್ಲಿ ತಿಳಿಸಿದೆ.
ಸೋಮವಾರ, ಮಿಜೋರಾಂನಲ್ಲಿ ಕಲ್ಲು ಕ್ವಾರಿಯಲ್ಲಿ ಅವಘಡ ಸಂಭವಿಸಿ, 12 ಮಂದಿ ಬಿಹಾರ ಮೂಲದ ಕಾರ್ಮಿಕರು ಸಿಕ್ಕಿಬಿದ್ದಿದ್ದರು. ಎಬಿಸಿಐ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ನ ಕಾರ್ಮಿಕರು ಮೌದರ್ಹ್ ಗ್ರಾಮದ ಹ್ನಾಥಿಯಾಲ್ನಲ್ಲಿರುವ ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಮಧ್ಯಾಹ್ನ 3 ಗಂಟೆಗೆ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ವಿನೀತ್ ಕುಮಾರ್ ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಹ್ನಾಥಿಯಾಲ್ ಜಿಲ್ಲೆಯ ಮೌದರ್ಹ್ನಲ್ಲಿರುವ ಖಾಸಗಿ ಸಂಸ್ಥೆಯ ಕಾರ್ಮಿಕರು ತಮ್ಮ ಊಟದ ವಿರಾಮದಿಂದ ಹಿಂತಿರುಗಿದ್ದಾಗ ಕಲ್ಲು ಕ್ವಾರಿ ಒಳಗೆ ಪ್ರವೇಶಿಸಿದರು.ಈ ಸ್ಥಳದಲ್ಲಿ 13 ಜನರು ಕೆಲಸ ಮಾಡುತ್ತಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಕ್ವಾರಿಯಲ್ಲಿ ಕಾರ್ಮಿಕರು ಕಲ್ಲುಗಳನ್ನು ಒಡೆದು ಸಂಗ್ರಹಿಸುತ್ತಿದ್ದಾಗ ಮೇಲಿನಿಂದ ಸಡಿಲವಾದ ಮಣ್ಣು ಕುಸಿದಿದೆ ಎಂದು ಸ್ಥಳೀಯರು ಘಟನೆಯ ಬಗ್ಗೆ ವಿವರಿಸಿದ್ದಾರೆ.