ಬೆಂಗಳೂರು, ನ 14 (DaijiworldNews/MS): ಲಂಡನ್-ಬೆಂಗಳೂರು ವಿಮಾನದಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದ ವ್ಯಕ್ತಿಯ ಪ್ರಾಣ ರಕ್ಷಿಸಿ ಬೆಂಗಳೂರು ಮೂಲದ ವೈದ್ಯ ಡಾ.ವಿಶ್ವರಾಜ್ ವೇಮಲ ಗಮನಸೆಳೆದಿದ್ದಾರೆ.
AI128 ವಿಮಾನದಲ್ಲಿ ವಿಶ್ವರಾಜ್ ನ.12ರಂದು ತಾಯಿ ಜತೆ ಲಂಡನ್ ನಿಂದ ಬೆಂಗಳೂರಿಗೆ ಹೊರಟಿದ್ದರು. ಈ ವೇಳೆ ನಡೆದ ಘಟನೆಯನ್ನು ವೈದ್ಯರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. "ದಾರಿ ಮಧ್ಯೆ 43 ವರ್ಷದ ವ್ಯಕ್ತಿಗೆ ಹಾರ್ಟ್ ಅಟ್ಯಾಕ್ ಆಗಿದೆ. ಆರಂಭದಲ್ಲಿ ಕರಾಚಿಯಲ್ಲಿ ವಿಮಾನ ಇಳಿಸುವ ಬಗ್ಗೆ ಯೋಜಿಸಲಾಗಿತ್ತು. ಈ ಸ್ಥಳ ವಿಮಾನ ಹಾರಾಟಕ್ಕೆ ಹತ್ತಿರವಾಗಿತ್ತು. ಆದರೆ ಇದು ಕಾರ್ಯಾರೂಪಕ್ಕೆ ಬರಲಿಲ್ಲ. ಈ ವೇಳೆ ಪರಿಸ್ಥಿತಿ ಕೈ ಮೀರುತ್ತಿತ್ತು. ವ್ಯಕ್ತಿಗೆ ಮತ್ತೊಮ್ಮೆ ಹೃದಯಾಘಾತವಾಗಿತ್ತು. ಆ ವ್ಯಕ್ತಿಯನ್ನು ನಾನು ಕಳೆದುಕೊಂಡೆ ಎಂದೇ ಕ್ಷಣ ಕಾಲ ಭಾವಿಸಿದ್ದೆ. ಆದರೆ ಅದೃಷ್ಟವಶಾತ್ ನನ್ನ ಬಳಿ ಹೃದಯಾಘಾತದ ಸಂದರ್ಭ ತಕ್ಷಣಕ್ಕೆ ಚಿಕಿತ್ಸೆ ನೀಡಿವ ಆಟೋಮೆಟೆಡ್ ಎಕ್ಸ್ ಟರ್ನಲ್ ಡಿಫಿಬ್ರಿಲೇಟರ್ ಇತ್ತು. ಜತೆಗೆ ವಿಮಾನದಲ್ಲಿ ತುರ್ತು ಪರಿಸ್ಥಿತಿಗಾಗಿ ಇರಿಸಿದ್ದ ವೈದ್ಯಕೀಯ ಔಷಧ ಬಳಸಿದೆ".
"ಅದರಲ್ಲೂ ಗಗನ ಸಖಿ ಮಲ್ಲಿಶಾ ಹಾಗೂ ಮಂಗಳೂರಿನವರಾದ ಗಗನ ಸಖಿ ಗಿರಿಥಾ ಅವರು ಸಹಾ ನೆರವಾದರು. ತಂಡದ ಮುಖ್ಯಸ್ಥ ಪ್ರಶಾಂತ್ ಅವರು ಸಿಬ್ಬಂದಿಗೆ ಅಗತ್ಯ ಸೂಚನೆ ನೀಡುತ್ತಿದ್ದರು. ಕೊನೆಗೂ ವಿಮಾನ ಮುಂಬೈಗೆ ಬಂದಿಳಿಯಿತು ರೋಗಿಯ ಆರೋಗ್ಯ ಸ್ಥಿರವಾಗಿತ್ತು.ತಕ್ಷಣ ತುರ್ತು ನಿಗಾ ಘಟಕಕ್ಕೆ ಕೈ ಬರಹದ ಸಂಪೂರ್ಣ ವಿವರಗಳೊಂದಿಗೆ ಅವರನ್ನು ಹಸ್ತಾಂತರಿಸಲಾಯಿತು. ಕಣ್ಣೀರು ಹಾಕುತ್ತಾ ರೋಗಿ ತನಗೆ ದನ್ಯವಾದ ತಿಳಿಸಿದರು. ನನ್ನ ಜೀವಮಾನವಿಡಿ 5 ಗಂಟೆಗಳ ಕಾಲ ನಡೆದ ಘಟನೆಯನ್ನು ನೆನೆಯುತ್ತೇನೆ. ಇದು ಎಂದಿಗೂ ಮರೆಯಲು ಸಾಧ್ಯವಿಲ್ಲ".
"ಒಂದು ಜೀವವನ್ನು ಉಳಿಸಲು ವಿಮಾನದಲ್ಲಿ ಇದ್ದ ವಿವಿಧ ಹಿನ್ನಲೆಯ ಪ್ರಯಾಣಿಕರು ಒಗ್ಗೂಡಿದ್ದು ನನಗೆ ಅದ್ಬುತವೆನಿಸಿತು. ರೋಗಿಯ ಆರೋಗ್ಯ ಸ್ಥಿರವಾಗಿದೆ ಎಂದು ಕ್ಯಾಪ್ಟನ್ ಘೋಷಿಸಿದಾಗ ಅದು ಸಂಭ್ರಮದ ಕ್ಷಣವಾಗಿತ್ತು , ನನ್ನ ತಾಯಿ ಮತ್ತು ನನ್ನನ್ನು ಎಲ್ಲರೂ ಉತ್ಸಾಹದಿಂದ ಅಭಿನಂದಿಸಿದರು".
ಸತತ 5 ತಾಸು ಚಿಕಿತ್ಸೆ ನೀಡಿ ಆ ವ್ಯಕ್ತಿಯನ್ನು ಬದುಕಿಸಿದ ಡಾ. ವಿಶ್ವರಾಜ್ ವೇಮಲ ಅವರು ಸದ್ಯ ಲಂಡನ್ ನಲ್ಲಿ ಸೇವೆಸಲ್ಲಿಸುತ್ತಿದ್ದು,ಬೆಂಗಳೂರಿನಲ್ಲಿಅಧ್ಯಯನ ನಡೆಸಿದ್ದರು.