ಕಲಬುರಗಿ, ನ 14 (DaijiworldNews/SM): ಗ್ರಾಹಕರಿಗೆ ನಂದಿನಿ ಹಾಲು ಖರೀದಿಸುವಾಗಲೇ ಬಿಸಿಯಾಗಿದೆ. ಏಕಾಏಕಿ ಹಾಲು ಹಾಗೂ ಮೊಸರಿನ ದರ ಮೂರು ರೂಪಾಯಿ ಹೆಚ್ಚಿಸಿ ಆದೇಶ ನೀಡಲಾಗಿದ್ದು, ಇದರ ಬೆನ್ನಲ್ಲೇ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಮಂಗಳವಾರದಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ. ಆದರೆ, ಹಾಲಿನ ದರ ಏರಿಕೆ ಬಗ್ಗೆ ಚರ್ಚಿಸಿ ನಿರ್ಧಾರ ಮಾಡಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದೂ ಇದು ಇದೀಗ ಗೊಂದಲಕ್ಕೆ ಕಾರಣವಾಗಿದೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ರೈತರಿಗೆ ಅನುಕೂಲವಾಗುವಂತೆ ಹಾಗೂ ಜನರಿಗೆ ಹೊರೆಯಾಗದಂತೆ ಹಾಲಿನ ದರ ಏರಿಕೆಯ ನಿರ್ಧಾರ ಕೈಗೊಳ್ಳಲಾಗುವುದೆಂದ ಅವರು, ನವೆಂಬರ್ 20ರ ಬಳಿಕ ಹಾಲಿನ ದರ ಏರಿಕೆಯ ವಿಷಯ ಅಂತಿಮಗೊಳಿಸಲಾಗುವುದು ಎಂದಿದ್ದಾರೆ.
ಹಾಲು, ಮೊಸರಿನ ಪರಿಷ್ಕೃತ ದರ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಟೋನ್ಡ್ ಹಾಲಿನ ದರ 37 ರಿಂದ 40 ರುಪಾಯಿಗೆ ಹೆಚ್ಚಳ ಮಾಡಲಾಗಿದೆ. ಇನ್ನು ಸ್ಪೆಷನ್ ಹಾಲಿನ ದರ 43 ರಿಂದ 46 ರೂಪಾಯಿಗೆ, ಸಮೃದ್ಧಿ ಹಾಲಿನ ದರ 48 ರಿಂದ 51 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಆದರೆ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಹೇಳಿಕೆ ಗೊಂದಲಕ್ಕೆ ಕಾರಣವಾಗಿದೆ.