ಶಿವಮೊಗ್ಗ, ನ 14 (DaijiworldNews/HR): ಕಾಡಿನಲ್ಲಿ ಕುಸಿದು ಬಿದ್ದ ಮಾಲೀಕನನ್ನ ಹೆಣ್ಣು ನಾಯಿಯೊಂದು ಪತ್ತೆ ಮಾಡಿ ಪ್ರಾಣ ಉಳಿಸಿರುವ ಘಟನೆ ಹೊಸನಗರ ತಾಲೂಕು ಸೂಡೂರು ಗ್ರಾಮದಲ್ಲಿ ನಡೆದಿದೆ.
ಆಯನೂರು ಪಟ್ಟಣಕ್ಕೆ ಖಾಸಗಿ ಕ್ಯಾಂಟೀನ್ ಕೆಲಸಕ್ಕೆಂದು ಶೇಖರಪ್ಪ ಹೋಗುತ್ತಿದ್ದು, ಏಳು ಗಂಟೆಗೆ ಕಾಡಿಗೆ ತೆರಳಿ ಒಣ ಕಟ್ಟಿಗೆಗಳನ್ನ ಸಂಗ್ರಹಿಸಿ ಹತ್ತು ಗಂಟೆಯೊಳಗೆ ಮನೆ ಸೇರುವುದು ಅವರ ದೈನಂದಿನ ಕಾಯಕ. ಆದರೆ ಶನಿವಾರದಂದು ಕಾಡಿಗೆ ಕಟ್ಟಿಗೆ ತರಲು ಹೋದಾಗ ಹನ್ನೆರಡು ಗಂಟೆ ಕಳೆದರೂ ಮನೆಗೆ ಮರಳಲಿಲ್ಲ. ಮನೆಯಲ್ಲಿ ಅವರ ಪತ್ನಿ ಹಾಗೂ ಮಗಳು ಮಧ್ಯಾಹ್ನದವರೆಗೆ ಕಾದರು. ಎಂದೂ ಕೂಡ ತಡವಾಗಿ ಬಾರದ ಶೇಖರಪ್ಪನವರ ಸುಳಿವು ಕಾಣದ ಮಗಳು ನೆರೆಹೊರೆಯವರು, ಸಂಬಂಧಿಕರಿಗೆ ಸುದ್ದಿ ಮುಟ್ಟಿಸಿದ್ದಾರೆ. ಶೇಖರಪ್ಪ ಜೊತೆಗಿದ್ದ ಮೊಬೈಲ್ ಕೂಡ ಟವರ್ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ.
ಇನ್ನು ಶೇಖರಪ್ಪ ಅವರನ್ನು ಹುಡುಕಿ ತರುವುದಾಗಿ ಗ್ರಾಮದ ಜನರು ಕಾಡಿನೊಳಗೆ ಹೋಗಿದ್ದು, ಪ್ರತಿ ಬಾರಿ ಅವರು ಕಾಡಿಗೆ ಹೋಗುವ ದಾರಿ ಕಟ್ಟಿಗೆ ಹುಡುಕುವ ಸ್ಥಳ ಎಲ್ಲವನ್ನು ಹುಡುಕಾಟ ನಡೆಸಿದ್ದಾರೆ. ಆದರೆ ಯಾವುದೇ ಪ್ರಯೋಜನ ಆಗಲಿಲ್ಲ. ಜನರೊಂದಿಗೆ ಶೇಖರಪ್ಪನವರ ಮನೆಯ ಹೆಣ್ಣು ನಾಯಿ ಕೂಡ ಹೆಜ್ಜೆ ಹಾಕಿದ್ದು, ಸಂಜೆ 4 ಗಂಟೆಯ ಸುಮಾರಿಗೆ ನಾಯಿ ಕಾಣೆಯಾಗಿದ್ದ ಶೇಖರಪ್ಪರನ್ನು ಪತ್ತೆ ಹಚ್ಚಿ ಕೂಗಿದ್ದು, ಜನರು ನಾಯಿ ಕೂಗಿನತ್ತ ಧಾವಿಸಿದಾಗ ಒಂದು ಮರದ ಕೆಳಗೆ ಶೇಖರಪ್ಪ ಪ್ರಜ್ಞಾಹೀನನಾಗಿ ಬಿದ್ದಿದ್ದರು.
ತಕ್ಷಣವೇ ಗ್ರಾಮಸ್ಥರು ಶೇಖರಪ್ಪನವರನ್ನ ರಿಪ್ಪನ್ಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ಶೇಖರಪ್ಪ ಸದ್ಯ ಚೇತರಿಸಿಕೊಂಡಿದ್ದು, ಶ್ವಾನ ಪ್ರೀತಿಯನ್ನು ಎಲ್ಲರೂ ಕೊಂಡಾಡಿದ್ದಾರೆ.