ಬೆಂಗಳೂರು, ನ 14 (DaijiworldNews/MS): ಮುಂಬರುವ ರಾಜ್ಯ ವಿಧಾನಸಭೆ ಚುನಾವಾಣೆಗೆ ಭರದ ಸಿದ್ಧತೆ ನಡೆಸುತ್ತಿರುವ ಕಾಂಗ್ರೆಸ್, ಪಕ್ಷದ ಚುನಾವಣೆ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ನಾಳೆ (ನ.೧೫) ಕೊನೆ ದಿನಾಂಕವಾಗಿದೆ.
ಅರ್ಜಿ ಸಲ್ಲಿಸಲು ಒಂದೇ ದಿನ ಬಾಕಿ ಇರುವ ಹಿನ್ನಲೆ ಆಕಾಂಕ್ಷಿಗಳು, ಇಂದು ಕೆಪಿಸಿಸಿ ಕಚೇರಿಗೆ ಮುಗಿಬಿದ್ದಿದ್ದು, ಅರ್ಜಿ ಸ್ವೀಕರಿಸುತ್ತಿದ್ದಾರೆ. ಈ ವೇಳೆ ಆಕಾಂಕ್ಷಿಗಳು ತಮ್ಮ ಶಕ್ತಿ ಪ್ರದರ್ಶನವನ್ನು ಮಾಡುತ್ತಿದ್ದಾರೆ. ಈವರೆಗೆ ೭೫೦ ಕ್ಕೂ ಹೆಚ್ಚು ಮಂದಿ ಅರ್ಜಿ ಪಡೆದುಕೊಂಡಿದ್ದು , 200 ಮಂದಿ ಅದನ್ನು ಸಲ್ಲಿಸಿದ್ದಾರೆ. ಎಂಬಿ ಪಾಟೀಲ್, ಮಾಜಿ ಸಿಎಂ ಸಿದ್ದರಾಮಯ್ಯ, ಪರಮೇಶ್ವರ್ ಸೇರಿದಂತೆ ಹಲವು ಮಂದಿ ಹಿರಿಯ ನಾಯಕರು ಇನ್ನು ಅರ್ಜಿ ಪಡೆದುಕೊಂಡಿಲ್ಲ.
ಅರ್ಜಿ ತೆಗೆದುಕೊಳ್ಳುವಾಗ 5 ಸಾವಿರ ರೂ. ಶುಲ್ಕ ಪಾವತಿಸಬೇಕು. ಭರ್ತಿ ಮಾಡಿದ ಅರ್ಜಿ ಸಲ್ಲಿಸುವಾಗ ಸಾಮಾನ್ಯ ವರ್ಗದವರು 2 ಲಕ್ಷ ರೂ. 'ಡಿ.ಡಿ' ಮತ್ತು ಕಾಂಗ್ರೆಸ್ ಸದಸ್ಯತ್ವ ನೋಂದಣಿ ಮಾಡಿಸಿದ ವಿವರ ಒದಗಿಸಬೇಕು. ಎಸ್ಸಿ, ಎಸ್ಟಿ ವರ್ಗದವರಿಗೆ ಶುಲ್ಕದಲ್ಲಿಶೇ.50ರಷ್ಟು ರಿಯಾಯಿತಿ ನೀಡಲಾಗಿದೆ.