ರಾಜಸ್ತಾನ, ನ 14 (DaijiworldNews/MS): ರಾಜಸ್ಥಾನದ ರೈತನೊಬ್ಬ ವಿಚಿತ್ರ ಕಾರಣಕ್ಕೆ ಪೊಲೀಸ್ ದೂರು ನೀಡಿದ್ದಾನೆ. ಇಲ್ಲಿನ ಬಹ್ರೋದ್ ಶಾಸಕ ಬಲ್ಜಿತ್ ಯಾದವ್ ಅವರು ತಮ್ಮ ಬೆಂಬಲಿಗರಿಗಾಗಿ ಕೃತಜ್ಞತೆ ಸಲ್ಲಿಸಲು ಭಾನುವಾರ ಹೆಲಿಕಾಪ್ಟರ್ ಮೂಲಕ ಅಗಸದಲ್ಲಿ ಮೆರವಣಿಗೆ ನಡೆಸಿ ಬೆಹಾರ್ನ ಪ್ರತಿ ಹಳ್ಳಿಯಲ್ಲಿ ಹೂವುಗಳನ್ನು ಸುರಿಸುವ ಮೂಲಕ ತಮ್ಮ ರಾಜಕೀಯ ಶಕ್ತಿಯನ್ನು ಪ್ರದರ್ಶಿಸಿದ್ದರು.
ಶಾಸಕರು ಪುಷ್ಟವೃಷ್ಟಿ ಮಾಡಿಸಿದ ಹೆಲಿಕಾಪ್ಟರ್ ಶಬ್ದಕ್ಕೆ ಹೆದರಿ ಎಮ್ಮೆ ಹೃದಯಾಘಾತದಿಂದ ಸಾವಿಗೀಡಾಗಿದೆ. ದೊಡ್ಡ ಸದ್ದು ಮಾಡುತ್ತಾ ಮನೆಯ ಮೇಲೆ ಹೆಲಿಕಾಪ್ಟರ್ ಹಾರಿ ಹೋಗಿದ್ದಕ್ಕೆ ಕೊಟ್ಟಿಗೆಯಲ್ಲಿ ಕಟ್ಟಿದ್ದ ಎಮ್ಮೆ ಹೆದರಿ ಮೃತಪಟ್ಟಿದೆ. ಕಡಿಮೆ ಎತ್ತರದಲ್ಲಿ ಹಾರಿಸಿದ್ದರಿಂದ ಕಿವಿಗಚ್ಚುವ ಶಬ್ದದಿಂದ ತನ್ನ ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಎಮ್ಮೆ ಪ್ರಾಣ ಕಳೆದುಕೊಂಡಿದೆ. ಇದಕ್ಕೆ ಪೈಲಟ್ ನಿರ್ಲಕ್ಷ್ಯವೇ ಕಾರಣವಾಗಿದೆ. ಹೀಗಾಗಿ ತನಗೆ ನ್ಯಾಯ ಕೊಡಿಸಿ ಎಂದು ರೈತ ದೂರು ನೀಡಿದ್ದಾರೆ.
ಈ ಬಗ್ಗೆ ದೂರು ಪಡೆದಿರುವ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಎಮ್ಮೆಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ವರದಿ ಬಂದ ಬಳಿಕ ಸಾವಿಗೆ ಕಾರಣ ತಿಳಿದುಬರಲಿದೆ. ನಂತರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.