ನಂದಿಗ್ರಾಮ, ನ 13 (DaijiworldNews/DB): ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕುರಿತು ಟಿಎಂಸಿ ಸಚಿವ ಅಖಿಲ್ ಗಿರಿ ಅವಹೇಳನಕಾರಿಯಾಗಿ ಮಾತನಾಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸಚಿವ ಅಖಿಲ್ ಗಿರಿ ಕ್ಷಮೆ ಯಾಚಿಸಿದ್ದಾರೆ.
ನಂದಿಗ್ರಾಮದ ಹಳ್ಳಿಯೊಂದರಲ್ಲಿ ಶುಕ್ರವಾರ ನಡೆದ ಸಮಾವೇಶದಲ್ಲಿ ಮಾತನಾಡಿದ್ದ ಗಿರಿ, ಬಿಜೆಪಿಯವರು ನಾನು ನೋಡಲು ಸುಂದರವಾಗಿಲ್ಲ ಎನ್ನುತ್ತಾರೆ. ಆದರೆ ಬಾಹ್ಯನೋಟದಿಂದ ಯಾರನ್ನೂ ತೀರ್ಮಾನ ಮಾಡುವುದು ಸರಿಯಲ್ಲ. ರಾಷ್ಟ್ರಪತಿ ಕಚೇರಿಯನ್ನು ನಾವು ಗೌರವದಿಂದ ಕಾಣುತ್ತೇವೆ. ಆದರೆ ರಾಷ್ಟ್ರಪತಿಗಳು ಹೇಗಿದ್ದಾರೆ ಎಂದು ಕುಹಕವಾಡಿದ್ದರು. ಗಿರಿ ಮಾತನಾಡಿದ ವೀಡಿಯೋ ವೈರಲ್ ಆಗುತ್ತಿದ್ದಂತೆ ರಾಷ್ಟ್ರಪತಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು.
ಇನ್ನು ಗಿರಿ ಹೇಳಿಕೆ ಬಗ್ಗೆ ಅವರದೇ ಪಕ್ಷ ಟಿಎಂಸಿ ಕೂಡಾ ಖಂಡನೆ ವ್ಯಕ್ತಪಡಿಸಿದ್ದು, ವಿವಾದದಿಂದ ಅಂತರ ಕಾಯ್ದುಕೊಂಡಿತ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಗ್ಗೆ ನಮಗೆ ಗೌರವವಿದ್ದು, ಅಖಿಲ್ ಗಿರಿ ಹೇಳಿಕೆಯನ್ನು ಪಕ್ಷ ಖಂಡಿಸುತ್ತದೆ. ಮಹಿಳಾ ಸಬಲೀಕರಣಕ್ಕೆ ಪಕ್ಷ ಒತ್ತು ನೀಡುತ್ತದೆಯೇ ಹೊರತು ಮಹಿಳಾ ದ್ವೇಷವನ್ನು ಸ್ವೀಕಾರ ಮಾಡುವುದಿಲ್ಲ ಎಂದು ಪಕ್ಷ ಟ್ವೀಟ್ ಮಾಡಿ ತಿಳಿಸಿತ್ತು.ಹೇಳಿಕೆ ವಿವಾದವಾದ ಬೆನ್ನಲ್ಲೇ ಅಖಿಲ್ ಗಿರಿ ಕ್ಷಮೆ ಯಾಚನೆ ಮಾಡಿದ್ದಾರೆ.