ಹೈದರಾಬಾದ್, ನ 13 (DaijiworldNews/DB): ಆಂಧ್ರಪ್ರದೇಶದ ಜನಸೇನಾ ನಾಯಕ, ನಟ ಪವನ್ ಕಲ್ಯಾಣ್ ಕಾರಿನ ಮೇಲೆ ಕುಳಿತು ಸವಾರಿ ಮಾಡಿರುವುದು ಇದೀಗ ಅವರಿಗೆ ಸಂಕಷ್ಟ ತಂದೊಡ್ಡಿದೆ. ಪೊಲೀಸರು ಪವನ್ ವಿರುದ್ದ ಸಂಚಾರಿ ನಿಯಮ ಉಲ್ಲಂಘನೆ ದೂರು ದಾಖಲಿಸಿಕೊಂಡಿದ್ದಾರೆ.
ಗುಂಟೂರು ರಸ್ತೆಯಲ್ಲಿ ನಟ ಪವನ್ ಕಲ್ಯಾಣ್ ಅವರು ತಮ್ಮ ಬೆಂಬಲಿಗರೊಂದಿಗೆ ನವೆಂಬರ್ 5ರಂದು ಸಂಚರಿಸುತ್ತಿದ್ದ ವೇಳೆ ಕಾರಿನ ಮೇಲೆ ಕಾಲು ಚಾಚಿ ಕುಳಿತಿದ್ದರು. ಇನ್ನು ಅವರ ಭದ್ರತಾ ಸಿಬಂದಿ ಮತ್ತು ಇತರರು ಕಾರಿನ ಎರಡೂ ಬದಿಗಳಲ್ಲಿ ನೇತಾಡಿಕೊಂಡಿದ್ದರು. ಇದೇ ರೀತಿ ಅವರ ಹಿಂಬಾಲಕರೂ ಕಾರಿನಲ್ಲಿ ಸಂಚಾರ ಮಾಡುತ್ತಿದ್ದರು. ಕಾರು ವೇಗವಾಗಿ ಚಲಿಸುತ್ತಿದ್ದ ಕಾರಣ ಮತ್ತೊಂದು ಕಡೆ ಇದ್ದ ಅಭಿಮಾನಿಗಳೂ ಅಷ್ಟೇ ವೇಗವಾಗಿ ಹೆಜ್ಜೆ ಹಾಕುತ್ತಿದ್ದರು.
ಇನ್ನು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಸಂಚಾರಿ ಪೊಲೀಸರು ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಕಾರಣಕ್ಕಾಗಿ ನಟ ಪವನ್ ಕಲ್ಯಾಣ್ ವಿರುದ್ದ ಕೇಸ್ ದಾಖಲಿಸಿದ್ದಾರೆ. ನಟನ ವಿರುದ್ದ ಪ್ರಬಲ ಸಾಕ್ಷ್ಯಗಳು ಲಭ್ಯವಿರುವುದರಿಂದ ಪವನ್ ಕಲ್ಯಾಣ್ಗೆ ಈ ಘಟನೆ ಸಂಚಕಾರವನ್ನು ತಂದೊಡ್ಡಿದೆ. ಪವನ್ ಕಲ್ಯಾಣ್ ಇತ್ತೀಚೆಗೆ ಆಂಧ್ರ ಸಿಎಂ ಜಗನ್ಮೋಹನ್ ರೆಡ್ಡಿ ವಿರುದ್ದ ತಿರುಗಿ ಬಿದ್ದಿದ್ದಾರೆ.