ನವದೆಹಲಿ, ನ 13 (DaijiworldNews/DB): ಬಾಲ್ಕನಿಯಿಂದ ಬಿದ್ದು ಮೆದುಳು ನಿಷ್ಕ್ರಿಯಗೊಂಡ 18 ತಿಂಗಳ ಬಾಲಕಿಯ ದೇಹದ ಅಂಗಾಂಗಗಳನ್ನು ಆಕೆಯ ಕುಟುಂಬ ಇಬ್ಬರು ರೋಗಿಗಳಿಗೆ ದಾನ ಮಾಡಿದ್ದಾರೆ. ಆ ಮೂಲಕ ಬಾಲಕಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾಳೆ.
ನವೆಂಬರ್ 6ರಂದು ತನ್ನ ಮನೆಯ ಬಾಲ್ಕನಿಯಿಂದ ಬಿದ್ದು ಹರಿಯಾಣದ ಮೇವಾತ್ ಮೂಲದ 18 ತಿಂಗಳ ಬಾಲಕಿ ಮಹಿರಾ ಗಂಭೀರ ಗಾಯಗೊಂಡಿದ್ದಳು. ಮೆದುಳಿಗೆ ಹಾನಿಯಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕಿಯನ್ನು ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನಲ್ಲಿ ದಾಖಲಿಸಲಾಗಿತ್ತು. ಅಲ್ಲಿ ಆಕೆಯನ್ನು ಟ್ರಾಮಾ ಸೆಂಟರ್ಗೆ ಸಾಗಿಸಲಾಗಿತ್ತು. ಆದರೆ ನವೆಂಬರ್ 11ರಂದು ಬೆಳಗ್ಗೆ ಆಕೆಯ ಮೆದುಳು ನಿಷ್ಕ್ರಿಯಗೊಂಡಿರುವುದನ್ನು ವೈದ್ಯರು ಪೋಷಕರಿಗೆ ತಿಳಿಸಿದರು.
ಮಗಳ ಸಾವಿನ ನೋವಿನಲ್ಲಿದ್ದ ಪೋಷಕರು ಆ ನೋವಿನ ನಡುವೆಯೂ ಆಕೆಯ ದೇಹದ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಇಬ್ಬರು ರೋಗಿಗಳ ಬಾಳಿಗೆ ಬೆಳಕಾಗಿದ್ದಾರೆ. ಇನ್ಸ್ಟಿಟ್ಯೂಟ್ ಆಫ್ ಲಿವರ್ ಅಂಡ್ ಬಿಲಿಯರಿ ಸೈನ್ಸಸ್ನಲ್ಲಿ ಚಿಕಿತ್ಸಾನಿರತವಾಗಿದ್ದ ಆರು ತಿಂಗಳ ಮಗುವಿಗೆ ಯಕೃತ್ತನ್ನು ಕಸಿ ಮಾಡಲಾಗಿದೆ. ಇನ್ನು ಎರಡೂ ಮೂತ್ರಪಿಂಡಗಳನ್ನು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನಲ್ಲಿದ್ದ 17 ವರ್ಷದ ಬಾಲಕನಿಗೆ ಕಸಿ ಮಾಡಲಾಗಿದೆ.
ಬಾಲಕಿಯ ಕಾರ್ನಿಯಾಗಳು ಮತ್ತು ಹೃದಯ ಕವಾಟಗಳನ್ನು ಸಂರಕ್ಷಿಸಲಾಗಿದ್ದು, ಮುಂದಿನ ದಿನಗಳಲ್ಲಿ ಅಗತ್ಯವುಳ್ಳ ರೋಗಿಗಳಿಗೆ ಜೋಡಿಸಲಾಗುವುದು ಎಂದು ಆಸ್ಪತ್ರೆಯ ನರ ಶಸ್ತ್ರಚಿಕಿತ್ಸೆಯ ಪ್ರಾಧ್ಯಾಪಕ ಡಾ. ದೀಪಕ್ ಗುಪ್ತಾ ತಿಳಿಸಿರುವುದಾಗಿ ವರದಿಯಾಗಿದೆ.