ನವದೆಹಲಿ, ನ 12 (DaijiworldNews/DB): ವಂಚನೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಸುಕೇಶ್ ಚಂದ್ರಶೇಖರ್ ಅವರನ್ನು ಬಿಜೆಪಿ ಅಧ್ಯಕ್ಷರನ್ನಾಗಿ ನೇಮಿಸಿದರೆ ಉತ್ತಮ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವ್ಯಂಗ್ಯವಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಳ್ಳು ಪತ್ತೆ ಪರೀಕ್ಷೆಯನ್ನು ನನ್ನ ಮೇಲೆ ಮಾಡಬೇಕೆಂದು ಬಿಜೆಪಿ ಹೇಳಿತ್ತು. ಇದೀಗ ಅದೇ ರೀತಿಯ ಒತ್ತಾಯವನ್ನು ಸುಕೇಶ್ ಕೂಡಾ ಮಾಡುತ್ತಿದ್ದಾರೆ. ಸುಕೇಶ್ ಮತ್ತು ಬಿಜೆಪಿ ನಾಯಕರು ಒಂದೇ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಹೀಗಾಗಿ ಅವರನ್ನು ಆ ಪಕ್ಷದ ಅಧ್ಯಕ್ಷರನ್ನಾಗಿ ನೇಮಕ ಮಾಡಲಿ ಎಂದರು.
ಬಿಜೆಪಿಗರು ಮಾತನಾಡಿದಂತೆಯೇ ಸುಕೇಶ್ ಕೂಡಾ ಮಾತನಾಡುತ್ತಿದ್ದಾರೆ. ಅಲ್ಲದೆ ಆ ಪಕ್ಷವನ್ನು ಸೇರಿಕೊಳ್ಳಲು ಸುಕೇಶ್ಗೆ ಸಂಪೂರ್ಣ ತರಬೇತಿ ಕೂಡಾ ನೀಡಲಾಗಿದೆ. ಬಹುಶಃ ಅವರನ್ನು ಬಿಜೆಪಿ ತನ್ನ ಸ್ಟಾರ್ ಕ್ಯಾಂಪೇನರ್ ಆಗಿ ಮಾಡಿಕೊಂಡಿರಬೇಕು ಎಂದು ಕುಟುಕಿದರು.
ಪ್ರಧಾನಿ ಮೋದಿಯವರ ರೋಡ್ ಶೋಗಳಿಗೆ ಜನರೇ ಬಾರದಿದ್ದರೆ ಸುಕೇಶ್ ಚಂದ್ರಶೇಖರ್ ಅವರನ್ನೇ ಕರೆದೊಯ್ಯಲಿ. ಅವರಲ್ಲಿ ತಮ್ಮ ವಂಚನೆಯ ವೈವಿಧ್ಯ ಕತೆಗಳನ್ನು ಹೇಳು ಜನಸಾಗರ ಹರಿದು ಬರುವಂತೆ ಮಾಡಬಹುದು ಎಂದು ಕುಹಕವಾಡಿದರು.