ಬೆಂಗಳೂರು, ನ 11 (DaijiworldNews/SM): ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಭವ್ಯ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದ್ದರು. ಆದರೆ, ಈ ಕಾರ್ಯಕ್ರಮಕ್ಕೆ ದೇವೇಗೌಡರನ್ನು ಕಾಟಾಚಾರಕ್ಕಷ್ಟೇ ಆಹ್ವಾನಿಸಲಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಪ್ರಧಾನಿಯವರು ಬಂದು ಹೋದ ನಂತರ ಜೆಡಿಎಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಪ್ರಧಾನಿಯವರು ಭಾಗವಹಿಸಿದ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನ ಮಂತ್ರಿಗಳಾದ ದೇವೇಗೌಡರನ್ನು ಆಹ್ವಾನಿಸಿರಲಿಲ್ಲ ಎಂದು ಹೇಳಿತ್ತು.
ಅದಕ್ಕೆ ಬಿಜೆಪಿ ತಿರುಗೇಟು ಕೊಟ್ಟು, ಪ್ರಧಾನಿಯಾಗಿದ್ದ ಏಕೈಕ ಕನ್ನಡಿಗ ದೇವೇಗೌಡರಿಗೆ ಮೊದಲ ಆಹ್ವಾನ ಪತ್ರ ಹೋಗಿದ್ದು ಮಾತ್ರವಲ್ಲ, ಖುದ್ದು ಸಿಎಂ ಬೊಮ್ಮಾಯಿಯವರೇ ದೂರವಾಣಿ ಕರೆ ಮಾಡಿ ಆಹ್ವಾನಿಸಿದ್ದಾರೆ. ಈ ವಿಷಯದಲ್ಲೂ ಸುಳ್ಳಾಡುವ ಜೆಡಿಎಸ್ ತನ್ನ ಸಮಯಸಾಧಕ ಬುದ್ಧಿ ಪ್ರದರ್ಶಿಸಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ದೇವೇಗೌಡರಿಗೆ ಕಳುಹಿಸಿದ ಆಹ್ವಾನ ಪತ್ರಿಕೆಯನ್ನು ಲಗತ್ತಿಸಿತ್ತು. ಅಷ್ಟೆ ಅಲ್ಲದೆ ಸಿಎಂ ಬೊಮ್ಮಾಯಿಯವರು ಮಾಧ್ಯಮಗಳ ಮುಂದೆ ದೇವೇಗೌಡರಿಗೆ ಫೋನ್ ಮಾಡಿದ್ದೆವು, ಆಹ್ವಾನ ನೀಡಿದ್ದೆವು ಎಂದಿದ್ದರು.
ಆದರೆ ಇಂದು ಜೆಡಿಎಸ್ ಮತ್ತೆ ಟ್ವೀಟ್ ಮಾಡಿ ತರಾಟೆಗೆ ತೆಗೆದುಕೊಂಡಿದೆ.ದೇವೇಗೌಡರನ್ನು ಕರೆದಿದ್ದು ನಿಜ. ಆದರೆ ಕರೆದ ರೀತಿ ನೀತಿ ಸರಿಯಿಲ್ಲ. ಮೇರು ನಾಯಕನ ವಿಷಯದಲ್ಲಿ ಬಿಜೆಪಿ ಸಂಸ್ಕೃತಿ, ಸಂಸ್ಕಾರ, ಶಿಷ್ಟಾಚಾರ ಇದೇನಾ? ಎಂದು ಮತ್ತೆ ಟ್ವೀಟ್ ಮಾಡಿ ಕಿಡಿಕಾರಿದೆ.