ಮಂಡ್ಯ, ನ 12 (DaijiworldNews/DB): ನನ್ನನ್ನು ಸೋಲಿಸುವ ಉದ್ದೇಶದಿಂದ ಜಿಲ್ಲೆಯ ಕೆಲವು ಕುತಂತ್ರಿ ನಾಯಕರು ನಿಖಿಲ್ ಕುಮಾರಸ್ವಾಮಿಯವರನ್ನು ಬಲಿಕೊಟ್ಟರು. ಆ ಮೂಲಕ ನಿಖಿಲ್ ಹಾಗೂ ಜೆಡಿಎಸ್ ಪಕ್ಷದ ಗೌರವವನ್ನೂ ಬೀದಿಪಾಲು ಮಾಡಿದರು ಎಂದು ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಆರೋಪಿಸಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಹಾಗೂ ಅಪ್ಪಾಜಿಗೌಡರನ್ನು ರಾಜಕೀಯವಾಗಿ ಮುಗಿಸಬೇಕೆಂಬ ಉದ್ದೇಶದಿಂದ ಕೆಲವು ಕೆಳ ಮಟ್ಟದ ನಾಯಕರು ಹಲವು ತಂತ್ರಗಳನ್ನು ನಡೆಸಿದ್ದಾರೆ. ಅದಕ್ಕಾಗಿ ನಿಖಿಲ್ ಕುಮಾರಸ್ವಾಮಿಯವರನ್ನು ಜಿಲ್ಲೆಗೆ ಕರೆ ತಂದು ಅವರ ಗೌರವ ಹಾಳು ಮಾಡಿದರು. ಎಂಎಲ್ಸಿ ಚುನಾವಣೆಯಲ್ಲಿ ನನ್ನನ್ನು ಸೋಲಿಸಿದ್ದಲ್ಲದೆ, ಎಂಪಿ ಚುನಾವಣೆಯಲ್ಲಿ ಸಾಲಗಾರನನ್ನಾಗಿಸಿದರು ಎಂದು ಕಿಡಿಕಾರಿದರು.
ದೊಡ್ಡ ಗೌಡರ ಕುಟುಂಬ ನನ್ನನ್ನು ಬೆಳೆಸಿದರೇ ಹೊರತು ತುಳಿಯುವ ಕೆಲಸ ಮಾಡಿಲ್ಲ. ಕೆಲ ತಿಂಗಳ ಕಾಲ ಸಂಸದನಾಗಿಯೂ ಕಾರ್ಯ ನಿರ್ವಹಿಸಲು ನನಗೆ ಅವರು ಅವಕಾಶ ಕಲ್ಪಿಸಿದ್ದಾರೆ ಎಂದು ಸ್ಮರಿಸಿದರು.
ಈಗಾಗಲೇ ನಾನು ಕ್ಷೇತ್ರ ಪ್ರವಾಸ ಕೈಗೊಂಡಿದ್ದೇನೆ. ಕಾರ್ಯಕರ್ತರನ್ನು ಸಂಘಟಿಸಿ, ಗ್ರಾಮ್ಯ ಸಮಸ್ಯೆ ಅರಿಯುವ ಕೆಲಸ ಮಾಡುತ್ತಿದ್ದೇನೆ. ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ವಿರೋಧಿಗಳು ಹಬ್ಬಿಸುತ್ತಿರುವ ವದಂತಿಗಳಿಗೆ ಜನ ಕಿವಿಗೊಡಬಾರದು .2023ರ ಚುನಾವಣೆಯಲ್ಲಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ನಿಶ್ಚಿತ ಎಂದು ಇದೇ ವೇಳೆ ಶಿವರಾಮೇಗೌಡ ಸ್ಪಷ್ಟಪಡಿಸಿದರು.