ಹುಬ್ಬಳ್ಳಿ, ನ 12 (DaijiworldNews/DB): ಬಿಜೆಪಿಯ ಅಭಿವೃದ್ದಿ ಕಾರ್ಯಗಳನ್ನು ನೋಡಿ ಜೆಡಿಎಸ್ ನಾಯಕರಿಗೆ ಹೊಟ್ಟೆ ಕಿಚ್ಚು ಜಾಸ್ತಿಯಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಎಚ್.ಡಿ. ಕುಮಾರಸ್ವಾಮಿ ಮತ್ತು ಸಾ.ರಾ. ಮಹೇಶ್ ಅವರಿಗೆ ಬಿಜೆಪಿಯ ಅಭಿವೃದ್ದಿ ಕಾರ್ಯಕ್ರಮಗಳನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಎಚ್ಡಿಕೆ ಕುಟುಂಬ ಸರ್ಕಾರದ ಉನ್ನತ ಹುದ್ದೆಯಲ್ಲಿದ್ದಾಗ ಕೆಂಪೇಗೌಡರ ಪ್ರತಿಮೆ ಸ್ಥಾಪಿಸಿರಲಿಲ್ಲ. ಯಾವುದೇ ಅಭಿವೃದ್ದಿಯೂ ಅವರಿಂದ ಆಗಲಿಲ್ಲ ಎಂದು ಕಿಡಿ ಕಾರಿದರು.
ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಸ್ವತಃ ಸಿಎಂ ಬೊಮ್ಮಾಯಿ ಅವರೇ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಕರೆ ಮಾಡಿ ಆಮಂತ್ರಿಸಿದ್ದಾರೆ. ಆದರೆ ಕಾರ್ಯಕ್ರಮಕ್ಕೆ ಅವರು ಗೈರಾಗಿರುವುದು ಯಾಕೆಂದು ಗೊತ್ತಿಲ್ಲ. ಅವರನ್ನು ಆಮಂತ್ರಿಸಿಲ್ಲ ಎಂದು ಹೇಳುತ್ತಿರುವುದು ಶುದ್ದ ಸುಳ್ಳು ಎಂದು ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದಂದಿನಿಂದಲೇ ರಾಹುಲ್ ಗಾಂಧಿಯವರಂತೆಯೇ ಮಾತನಾಡಲು ಆರಂಭಿಸಿದ್ದಾರೆ. ಬಹುಶಃ ಅವರಿಗೆ ರಾಹುಲ್ ನೆರಳು ತಾಕಿದೆ. ಬಿಜೆಪಿ ಏನು ಮಾಡಿದೆ ಎಂದು ಅವರು ಕೇಳುತ್ತಿದ್ದಾರೆ. ಕಳೆದೈದು ದಶಕದಲ್ಲಿ ಕಾಂಗ್ರೆಸ್ ಮಾಡದ ಅಭಿವೃದ್ದಿಯನ್ನು ಏಳೇ ವರ್ಷದಲ್ಲಿ ಬಿಜೆಪಿ ಮಾಡಿದೆ ಎಂದು ಇದೇ ವೇಳೆ ಅವರು ಪ್ರತಿಕ್ರಿಯಿಸಿದರು.
ಮೈಸೂರಿನಲ್ಲಿ ಟಿಪ್ಪು ಪ್ರತಿಮೆ ಸ್ಥಾಪಿಸಲು ಶಾಸಕ ತನ್ವೀರ್ ಸೇಟ್ಗೆ ಬೆಂಬಲಿಸಿದರೆ ಜನ ಬೆಂಬಲ ನೀಡಿದವರಿಗೆ ಸರಿಯಾದ ಪಾಠ ಕಲಿಸುತ್ತಾರೆ. ಸರ್ಕಾರದ ಅನುಮತಿ ಪಡೆಯದೆ ಪ್ರತಿಮೆ ಸ್ಥಾಪಿಸುವಂತಿಲ್ಲ. ಆದರೆ ಇಂತಹ ಪ್ರತಿಮೆ ಸ್ಥಾಪನೆಗೆ ನಮ್ಮ ಸ್ಪಷ್ಟ ವಿರೋಧವಿದೆ. ರಾಜಕೀಯ ತುಷ್ಟೀಕರಣ ನೀತಿ ಸಲ್ಲದು ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.