ತೆಲಂಗಾಣ, ನ 12 (DaijiworldNews/DB): ಪ್ರತಿದಿನ ನಾನು 2-3 ಕೆ.ಜಿ ಬೈಗುಳ ತಿನ್ನುತ್ತೇನೆ. ಆದರೆ ಆ ಬೈಗುಳಗಳೇ ಪೌಷ್ಠಿಕಾಂಶವಾಗಿ ಬದಲಾಗುವಂತಹ ವಿಶೇಷ ಶಕ್ತಿ ನನಗೆ ದೇವರು ಕರುಣಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ತೆಲಂಗಾಣದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಶನಿವಾರ ಮಾತನಾಡಿದ ಅವರು, ನನಗೆ ಬೈಯುತ್ತಾರೆ. ಎಷ್ಟೆಂದರೆ ಆ ಬೈಗುಳ ದಿನಕ್ಕೆ ಎರಡು-ಮೂರು ಕೆಜಿಯಷ್ಟಿರುತ್ತದೆ. ಆದರೆ ಅದೆಲ್ಲವೂ ಪೌಷ್ಠಿಕಾಂಶವಾಗಿ ಬದಲಾಗುತ್ತದೆ. ದೇವರು ಅಂತಹ ವಿಶೇಷ ಶಕ್ತಿಯನ್ನು ನನಗೆ ನೀಡಿದ್ದಾನೆ ಎಂದು ಸಿಎಂ ಕೆ. ಚಂದ್ರಶೇಖರ್ ರಾವ್ ಅವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.
ಕೆಲವರು ಹತಾಷೆಗೊಳಗಾಗಿಯೋ ಅಥವಾ ಆತಂಕದಿಂದಲೋ ನನ್ನನ್ನು ಬೈಯುತ್ತಾರೆ. ಆದರೆ ನನ್ನತ್ತ ಬರುವ ಬೈಗುಳದಿಂದ ನೀವೆಂದೂ ದಾರಿ ತಪ್ಪಬೇಡಿ. ಬೈಗುಳಗಳ ತಂತ್ರಕ್ಕೆ ನೀವು ಬಲಿಯಾಗಬೇಡಿ ಎಂದು ಇದೇ ವೇಳೆ ಕಾರ್ಯಕರ್ತರನ್ನು ಎಚ್ಚರಿಸಿದರು.
ಬಿಜೆಪಿ, ಮೋದಿಯನ್ನು ನಿಂದಿಸಿದರೆ ನಿಂದಿಸಲಿ. ಆದರೆ ತೆಲಂಗಾಣದ ಜನರನ್ನು ನಿಂದಿಸಿದರೆ ಮುಂದಿನ ದಿನಗಳಲ್ಲಿ ಅದಕ್ಕೆ ಬೇಕಾದ ಬೆಲೆ ತೆರಲು ಸಿದ್ದರಾಗಬೇಕಾಗುತ್ತದೆ ಎಂದರು.