ನವದೆಹಲಿ, ನ 12 (DaijiworldNews/DB): ಮೃತ ತಂದೆಯನ್ನು ಬದುಕಿಸಲು ಎರಡು ತಿಂಗಳ ಶಿಶುವನ್ನು ಅಪಹರಣ ಮಾಡಿ ಬಲಿ ನೀಡಲು ಮುಂದಾದ ಆರೋದಲ್ಲಿ ಮಹಿಳೆಯೊಬ್ಬಳನ್ನು ಪೊಲೀಸರು ಆಗ್ನೇಯ ದೆಹಲಿಯಲ್ಲಿ ಬಂಧಿಸಿದ್ದಾರೆ.
ಕೋಟ್ಲಾ ಮುಬಾರಕ್ಪುರ ನಿವಾಸಿ ಶ್ವೇತಾ (25) ಬಂಧಿತ ಮಹಿಳೆ. ಶಿಶುವನ್ನು ಈಕೆಯಿಂದ ವಶಪಡಿಸಿಕೊಳ್ಳಲಾಗಿದ್ದು, ಸುರಕ್ಷಿತವಾಗಿದೆ ಎಂದು ಪೊಲೀಸರು ಶನಿವಾರ ಮಾಹಿತಿ ನೀಡಿದ್ದಾರೆ. ಈಕೆ ಈ ಹಿಂದೆ ಎರಡು ದರೋಡೆ ಮತ್ತು ಕಳ್ಳತನ ಪ್ರಕರಣಗಳಲ್ಲಿಯೂ ತೊಡಗಿದ್ದಳು ಎಂದು ತಿಳಿದು ಬಂದಿದೆ.
ಗುರುವಾರ ಸಂಜೆ ವೇಳೆಗೆ ಅಪರಿಚಿತ ಮಹಿಳೆಯು ಗರ್ಹಿ ಪ್ರದೇಶದ ಎರಡು ತಿಂಗಳ ಗಂಡು ಮಗುವನ್ನು ಅಪಹರಿಸಿರುವ ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಪೊಲೀಸರ ತಂಡ ರಚಿಸಿ ಹುಡುಕಾಟ ನಡೆಸಲಾಗಿತ್ತು.
ಮಹಿಳೆಯು ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ತಾನು ಜಚ್ಚಾ-ಬಚ್ಚಾ ಆರೈಕೆಗಾಗಿ ಕೆಲಸ ಮಾಡುವ ಎನ್ಜಿಒ ಸದಸ್ಯೆ ಎಂದು ಹೇಳಿಕೊಂಡು ಶಿಶುವಿನ ತಾಯಿಯನ್ನು ಭೇಟಿಯಾಗಿದ್ದಳು. ಬಳಿಕ ಶಿಶುವನ್ನು ಪರೀಕ್ಷೆ ಮಾಡುವ ನೆಪದಲ್ಲಿ ಅಪಹರಣ ಮಾಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಈಕೆಯ ತಂದೆ ಕಳೆದ ಅಕ್ಟೋಬರ್ನಲ್ಲಿ ನಿಧನರಾಗಿದ್ದು, ಅದೇ ಲಿಂಗದ ಶಿಶುವನ್ನು ನರಬಲಿ ನೀಡಿದರೆ ತನ್ನ ತಂದೆಯನ್ನು ಬದುಕಿಸಬಹುದು ಎಂಬ ಆಲೋಚನೆಯಿಂದ ಈ ಕೃತ್ಯ ಎಸಗಿದ್ದಾಳೆ ಎಂದು ತನಿಖೆ ವೇಳೆ ಆಕೆ ಹೇಳಿದ್ದಾಳೆ ಎನ್ನಲಾಗಿದೆ.