ಕಲಬುರ್ಗಿ, ನ 12 (DaijiworldNews/MS): ಎರಡು ರಾಷ್ಟ್ರೀಯ ಪಕ್ಷಗಳಿಂದ ಇತ್ತೀಚೆಗೆ ರಾಜ್ಯದಲ್ಲಿ ಪೋಸ್ಟರ್ ವಾರ್ ನಡೆಯುತ್ತಿದೆ. ಈ ನಡುವೆ ಶಾಸಕ ಪ್ರಿಯಾಂಕ ಖರ್ಗೆ ಕಾಣೆಯಾಗಿದ್ದಾರೆ ಎಂದು ಬಿಜೆಪಿ ಪೋಸ್ಟರ್ ಅಂಟಿಸಿತ್ತು.
"ಕಲಬುರಗಿ ಜಿಲ್ಲೆ ಚಿತ್ತಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ, ಈ ವ್ಯಕ್ತಿಯನ್ನು ಯಾರಾದರೂ ಚಿತ್ತಾಪುರ ದಲ್ಲಿ ನೋಡಿದ್ದೀರಾ? ಈ ವ್ಯಕ್ತಿ ಎಲ್ಲಿಯಾದರೂ ಕಂಡು ಬಂದರೇ ಚಿತ್ತಾಪುರ ಕ್ಷೇತ್ರಕ್ಕೆ ಬೇಟಿ ನೀಡುವಂತೆ ತಿಳಿಸಿ" ಎಂದು ಬಿಜೆಪಿ ಪೋಸ್ಟರ್ ಅಂಟಿಸಿತ್ತು. ಈ ವಿಚಾರವಾಗಿ ಪ್ರಿಯಾಂಕ್ ವಾಗ್ದಾಳಿ ನಡೆಸಿದ್ದು " ನನ್ನ ಕುಟುಂಬದ ಮೇಲೆ ವೈಯಕ್ತಿಕ ದಾಳಿ ಮಾಡಲಾಗುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರನ್ನು ಕೆಣಕಿದರೆ ಸುಮ್ಮನಿರಲ್ಲ: ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಾವು ಮನಸ್ಸು ಮಾಡಿದರೆ ಬಿಜೆಪಿಯ ಒಬ್ಬ ನಾಯಕ ಓಡಾಡಲು ಬಿಡೋದಿಲ್ಲ ಇದನ್ನು ಬೆದರಿಕೆ ಎಂದು ಬೇಕಾದ್ರೂ ತಿಳಿದುಕೊಳ್ಳಿ, ಏನಾದ್ರೂ ಅಂದ್ಕೊಳ್ಳಿ. ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಗುಡುಗಿದ್ದಾರೆ.
ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷದವರಿಗೆ ಸಹನೆ ಇರಬೇಕು. ನನಗೆ ನಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆಯವರಷ್ಟು ಸಹನೆ ಖಂಡಿತಾ ಇಲ್ಲ. ಕಲಬುರಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದವರು ಸತ್ತೋಗಿಲ್ಲ. ನಾವು ಮನಸ್ಸು ಮಾಡಿದರೆ ಒಬ್ಬನೇ ಒಬ್ಬ ಬಿಜೆಪಿ ಮುಖಂಡ ಓಡಾಡಲಾಗಲ್ಲ. ನಿಮಗೆ ಅಂತಹ ವಾತಾವರಣ ಬೇಕಿದ್ದರೆ ಅದಕ್ಕೂ ನಾವು ಸಿದ್ಧರಿದ್ದೇವೆ ಎಂದು ಎಚ್ಚರಿಸಿದ್ದಾರೆ