ಮುಂಬೈ, ನ 12 (DaijiworldNews/DB): ರಾಹುಲ್ ಗಾಂಧಿ ಮತ್ತು ಆದಿತ್ಯ ಠಾಕ್ರೆ ಇಬ್ಬರೂ ಪ್ರಮುಖ ಯುವ ನಾಯಕರು. ದೇಶ ಮುನ್ನಡೆಸುವ ಸಾಮರ್ಥ್ಯ ಇಬ್ಬರಲ್ಲೂ ಇದೆ ಎಂದು ಶಿವಸೇನಾದ ರಾಜ್ಯಸಭಾ ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.
ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾದ ಬಳಿಕ ಅವರು ಶನಿವಾರ ಮಾತನಾಡಿದರು. ದೇಶದ ಒಗ್ಗೂಡುವಿಕೆಗಾಗಿ ಇಬ್ಬರೂ ಹೆಜ್ಜೆ ಹಾಕುತ್ತಿದ್ದಾರೆ. ಹೊಸ ಶಕ್ತಿಯ ಉದಯಕ್ಕೆ ಈ ಹೆಜ್ಜೆ ಕಾರಣವಾಗಲಿದೆ ಎಂದರು.
ಭಾರತವನ್ನು ಮುನ್ನಡೆಸುವ ಸಾಮರ್ಥ್ಯ ಇಬ್ಬರಲ್ಲೂ ಇದೆ. ದೇಶಕ್ಕಾಗಿ ಕೆಲಸ ಮಾಡುವ ಇಚ್ಚಾಶಕ್ತಿಯೂ ಇಬ್ಬರು ನಾಯಕರಲ್ಲಿದೆ ಎಂದವರು ಬಣ್ಣಿಸಿದರು.
ಉದ್ದವ್ ಠಾಕ್ರೆ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಒಂದಾಗಲಿದ್ದಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಬ್ಬರ ಅಜ್ಜಂದಿರ ನಡುವೆ ಬಾಂಧವ್ಯ ತುಂಬಾ ಚೆನ್ನಾಗಿತ್ತು. ಅಂಬೇಡ್ಕರ್ ಮತ್ತು ಪ್ರಭೋದಂಕರ್ ಠಾಕ್ರೆಯವರು ಸಂಯುಕ್ತ ಮಹಾರಾಷ್ಟರ ಚಳವಳಿಯಲ್ಲಿ ಭಾಗಿಗಳಾಗಿದ್ದದ್ದು ಸ್ಮರಣೀಯ. ಮರಾಠಿ ಅಸ್ಮಿತೆ ಬಗ್ಗೆ ಅಂಬೇಡ್ಕರ್ ಒಲವು ಹೊಂದಿದ್ದರು ಎಂದರು.