ಚೆನ್ನೈ, ನ 12 (DaijiworldNews/DB): ವಾಟ್ಸಾಪ್ನಲ್ಲಿ ಯಾರೋ ಕಳುಹಿಸಿದ್ದನ್ನು ಸತ್ಯವೆಂದು ನಂಬಿ ಫ್ಲೇಮ್ ಲಿಲ್ಲಿ ಹೂವಿನ ಗಿಡದ ಗೆಡ್ಡೆ ತಿನ್ನಲು ಹೋಗಿ ಯುವಕನೊಬ್ಬ ಪ್ರಾಣ ಕಳೆದುಕೊಂಡ ಘಟನೆ ಚೆನ್ನೈನಲ್ಲಿ ನಡೆದಿದೆ.
ತಿರುಪಟ್ಟೂರು ಜಿಲ್ಲೆಯ ಅಂಬೂರು ಬಳಿಯ ಮಿನ್ನೂರು ಮೂಲದ ಲೋಕನಾಥನ್ (25) ಮೃತ ಯುವಕ. ಮಿನ್ನೂರಿನ ಖಾಸಗಿ ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ಈತ ಫ್ಲೇಮ್ ಲಿಲ್ಲಿ ಹೂವಿನ ಗಿಡದ ಗೆಡ್ಡೆ ಗೆಣಸುಗಳನ್ನು ತಿನ್ನುವುದರಿಂದ ದೇಹಕ್ಕೆ ಒಳ್ಳೆಯದು ಎಂಬ ಮಾಹಿತಿಯನ್ನು ವಾಟ್ಸಾಪ್ನಲ್ಲಿ ನೋಡಿದ್ದಾನೆ. ಇದನ್ನು ಸತ್ಯವೆಂದು ನಂಬಿದ ಯುವಕ ತನ್ನೊಂದಿಗೆ ಕೆಲಸ ಮಾಡುತ್ತಿದ್ದ ನಟರಂಪಳ್ಳಿಯ ಪಚೂರ್ ನಿವಾಸಿ ರೆತಿನಮ್ (45) ಎಂಬವರೊಂದಿಗೆ ಸೇರಿ ಶುಕ್ರವಾರ ಸೆನ್ಸಾಂಟಲ್ ಗೆಡ್ಡೆಯನ್ನು ಸೇವಿಸಿದ್ದಾರೆ.
ಆದರೆ ಸ್ವಲ್ಪ ಸಮಯದಲ್ಲೇ ಇಬ್ಬರೂ ಅಸ್ವಸ್ಥರಾಗಿದ್ದು, ಆತಂಕಗೊಂಡ ಕುಟುಂಬ ಕೂಡಲೇ ವೆಲ್ಲೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಲೋಕನಾಥನ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ರೆತಿನಮ್ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದು ಬಂದಿದೆ. ಅಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.