ಆಗ್ರಾ, ನ 12 (DaijiworldNews/DB): ಮೂತ್ರಕೋಶದ ಕಲ್ಲು ಶಸ್ತ್ರಚಿಕಿತ್ಸೆಗೆಂದು ಆಸ್ಪತ್ರೆಗೆ ಹೋದ ವ್ಯಕ್ತಿಯ ಕಿಡ್ನಿಯೇ ಮಾಯವಾದ ಘಟನೆ ಅಲೀಗಢದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಖಾಸ್ಗಂಜ್ ಮುಖ್ಯ ಅಭಿವೃದ್ಧಿ ಅಧಿಕಾರಿಯ ಕಚೇರಿಯಲ್ಲಿ ನಿಯೋಜನೆಗೊಂಡಿದ್ದ ಖಾಸ್ಗಂಜ್ ಜಿಲ್ಲೆಯ ನಗ್ಲಾ ತಾಲ್ ಗ್ರಾಮದ ಸುರೇಶ್ ಚಂದ್ರ ಅವರಿಗೆ ಕೆಳ ಹೊಟ್ಟೆಯಲ್ಲಿ ತೀವ್ರತರದ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಿಸಿದಾಗ ಎಡಭಾಗದ ಕಿಡ್ನಿ ಇಲ್ಲದಿರುವುದು ಪತ್ತೆಯಾಗಿದೆ. ಕೂಡಲೇ ಅವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು, ತನಿಖೆಗೆ ಆದೇಶಿಲಾಗಿದೆ. ಅಲ್ಲದೆ ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮುಖ್ಯ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಖಾಸ್ಗಂಜ್ ಸಿಡಿಒ ಸಚಿನ್ ತಿಳಿಸಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಎಪ್ರಿಲ್ 14ರಂದು ಸುರೇಶ್ ಅವರು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಿಸಿದಾಗ ಅವರ ಕಿಡ್ನಿಯಲ್ಲಿ ಕಲ್ಲು ಇರುವುದು ಗೊತ್ತಾಗಿತ್ತು. ಹೀಗಾಗಿ ಶಸ್ತ್ರಚಿಕಿತ್ಸೆ ಮೂಲಕ ಅದನ್ನು ಹೊರ ತೆಗೆಯುವುದಕ್ಕಾಗಿ ಅಲಿಗಢದ ಖಾಸಗಿ ಆಸ್ಪತ್ರೆಯೊಂದಕ್ಕೆ ಹೋಗುವಂತೆ ವ್ಯಕ್ತಿಯೊಬ್ಬರು ಸಲಹೆ ನೀಡಿದರು. ಅದರಂತೆ ಅದೇ ದಿನ ಶಸ್ತ್ರಚಿಕಿತ್ಸೆಗಾಗಿ ಸುರೇಶ್ ಆ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಬಳಿಕ ಕಿಡ್ನಿ ಕಲ್ಲು ಹೊರ ತೆಗೆಯಲಾಗಿದೆ ಎಂದು ವೈದ್ಯರು ತಿಳಿಸಿದ್ದು, ಎಪ್ರಿಲ್ 17ರಂದು ಅವರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು. ಆದರೆ ಅಕ್ಟೋಬರ್ 29ರಂದು ಅವರಿಗೆ ಕೆಳಹೊಟ್ಟೆಯಲ್ಲಿ ವಿಪರೀತ ನೋವು ಕಾಣಿಸಿಕೊಂಡಿದ್ದು, ಕೂಡಲೇ ವೈದ್ಯರನ್ನು ಸಂಪರ್ಕಿಸಿದಾಗ ಎಡಭಾಗದಲ್ಲಿ ದೊಡ್ಡ ಶಸ್ತ್ರಚಿಕಿತ್ಸೆಯ ಗಾಯದ ಗುರುತು ಕಂಡು ಬಂದಿತು. ಹೀಗಾಗಿ ವೈದ್ಯರು ಅಲ್ಟ್ರಾಸೌಂಡ್ ಪರೀಕ್ಷೆಗೆ ಸಲಹೆ ಮಾಡಿದರು. ಈ ಪರೀಕ್ಷೆಯ ವರದಿ ಬಂದಾಗ ಅವರ ಒಂದು ಕಿಡ್ನಿಯೇ ನಾಪತ್ತೆಯಾಗಿರುವುದು ತಿಳಿದು ಬಂದಿತು.
ಇನ್ನು ಶಸ್ತ್ರಚಿಕಿತ್ಸೆ ನಡೆಸಿದ ಸಿಬಂದಿಯನ್ನು ಈ ಬಗ್ಗೆ ವಿಚಾರಿಸಿದಾಗ ಯಾವುದೇ ಸೂಕ್ತ ಉತ್ತರ ಲಭಿಸಿಲ್ಲ. ಹೀಗಾಗಿ ಉನ್ನತಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ಸುರೇಶ್ ತಿಳಿಸಿದ್ದಾರೆ.