ನವದೆಹಲಿ, ನ 12 (DaijiworldNews/DB): ಧಾರ್ಮಿಕ ಹಚ್ಚೆ ಹಾಕಿಸಿಕೊಂಡಿರುವ ವ್ಯಕ್ತಿಯನ್ನು ಕೇಂದ್ರೀಯ ಸಶಸ್ತ್ರ ಸೇನಾಪಡೆಗಳು, ಇತರ ಪಡೆಗಳು ಹಾಗೂ ಎನ್ಐಎಯು ಉದ್ಯೋಗಕ್ಕೆ ತೆಗೆದುಕೊಳ್ಳಲು ನಿರಾಕರಿಸಿವೆ.
ಸದ್ಯ ಉದ್ಯೋಗದಿಂದ ವಂಚಿತನಾದ ವ್ಯಕ್ತಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾನೆ. ಈತ ಬಲಗೈನ ಹಿಂಭಾಗದಲ್ಲಿ ಧಾರ್ಮಿಕ ಸಂಕೇತದ ಹಚ್ಚೆಯನ್ನು ಹಾಕಿಸಿಕೊಂಡಿದ್ದ. ಆದರೆ ಬಲಗೈನಲ್ಲಿ ಯೋಧ ಸೆಲ್ಯೂಟ್ ಮಾಡಬೇಕಿರುವುದರಿಂದ ಬಲಗೈನಲ್ಲಿ ಇಂತಹ ಸಂಕೇತಗಳಿರುವುದು ಗೃಹ ಸಚಿವಾಲಯದ ನಿಯಮಗಳ ಪ್ರಕಾರ ಸರಿಯಲ್ಲ. ಹೀಗಾಗಿ ಅವರನ್ನು ಕೆಲಸಕ್ಕೆ ನೇಮಿಸಿಕೊಳ್ಳಲು ನಿರಾಕರಿಸಲಾಗಿದೆ ಎಂದು ಆಯಾ ಸಂಸ್ಥೆಗಳು ತಿಳಿಸಿವೆ.
ಇದೀಗ ನ್ಯಾಯಾಲಯದ ಮೆಟ್ಟಿಲೇರಿರುವ ಅರ್ಜಿದಾರ ಲೇಸರ್ ಶಸ್ತ್ರಚಿಕಿತ್ಸೆ ಮುಖಾಂತರ ಆ ಹಚ್ಚೆಯನ್ನು ತೆಗೆದುಕೊಳ್ಳಲು ಸಿದ್ದವಿರುವುದಾಗಿ ಒಪ್ಪಿಕೊಂಡಿದ್ದಾರೆ. ಹೀಗಾಗಿ ಆತನಿಗೆ ಸೇನಾಪಡೆಗಳ ನೂತನ ವೈದ್ಯಕೀಯ ಮಂಡಳಿಯೆದುರು ಪರೀಕ್ಷೆಗೆ ಹಾಜರಾಗಲು ನ್ಯಾಯಪೀಠ ಸಮ್ಮತಿ ನೀಡಿದೆ.