ಬೆಂಗಳೂರು, ನ 11 (DaijiworldNews/DB): ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮದ ಬಗ್ಗೆ ಇಷ್ಟು ವಿಷಕಾರುವ ಇವರಿಗೆ ಮೇಲುಕೋಟೆ ಅಯ್ಯಂಗಾರ್ ಹಾಗೂ ಕೊಡವರ ಮಾರಣಹೋಮ ನಡೆಸಿದ ಟಿಪ್ಪು ಮಾತ್ರ ಮನೆದೇವರಾ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲು ಪ್ರಶ್ನಿಸಿದ್ದಾರೆ.
ಸರ್ಕಾರಿ ಹಣದಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡಿದ್ದು ಅಪರಾಧ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ ಕುರಿತು ಸರಣಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಅವರು, ಹಿಂದೂಗಳನ್ನು ಮತಾಂತರಗೊಳಿಸಿ, ಹೆಣ್ಣು ಮಕ್ಕಳನ್ನು ಅತ್ಯಾಚಾರಗೊಳಿಸುತ್ತಿದ್ದವ ಇವರಿಗೆ ಮಾದರಿ ಎಂದಾದರೆ ಬೌದ್ಧಿಕ ದಾರಿದ್ರ್ಯಕ್ಕೆ ಏನೆನ್ನಬೇಕು ಎಂದು ಕಿಡಿ ಕಾರಿದ್ದಾರೆ.
ಸಮೃದ್ದಿಯ ಪ್ರತಿಮೆ ಅನಾವರಣ ಕಾರ್ಯಕ್ರಮ ಬರೀ ಗಿಮಿಕ್ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಕಾಂಗ್ರೆಸ್ ನ ಶಾಸಕ ತನ್ವಿರ್ ಸೇಟ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮೈಸೂರಿನಲ್ಲಿ 100 ಅಡಿ ಎತ್ತರದ ಟಿಪ್ಪು ಸುಲ್ತಾನ್ ಪ್ರತಿಮೆ ನಿರ್ಮಿಸುವುದಾಗಿ ಹೇಳುತ್ತಾರೆ! ಕಾಂಗ್ರೆಸ್ನ ಕೀಳು ಮಟ್ಟದ ರಾಜಕಾರಣಕ್ಕೆ ಮತ್ತೊಂದು ಸಾಕ್ಷಿ ಎನ್ನುವ ಹಾಗೆ, ಕೆಂಪೇಗೌಡರ ಪ್ರತಿಮೆಯ ಬಗ್ಗೆಯೂ ಇವರ ರಾಜಕೀಯ ನಿಂತಿಲ್ಲ ಎಂದು ನಳಿನ್ಕುಮಾರ್ ಕಟೀಲು ಅಸಮಾಧಾನ ವ್ಯಕ್ತಪಡಿಸಿದ್ದಾರೆ.