ಖಗಾರಿಯಾ, ನ 11 (DaijiworldNews/DB): ದಿನಗೂಲಿ ನೌಕರರೊಬ್ಬರಿಗೆ 37.5 ಲಕ್ಷ ರೂ. ಬಾಕಿ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬಂದಿರುವ ಘಟನೆ ಬಿಹಾರದಲ್ಲಿ ನಡೆದಿದೆ. ನೋಟಿಸ್ ನೋಡಿ ನೌಕರ ಆಘಾತಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ.
ಖಗಾರಿಯಾ ಜಿಲ್ಲೆಯ ಮಘೌನಾ ಗ್ರಾಮದ ನಿವಾಸಿ ಗಿರೀಶ್ ಯಾದವ್ ಅವರು 500 ರೂ.ಗಳನ್ನು ದಿನಗೂಲಿ ನೌಕರರಾಗಿ ಪ್ರತಿದಿನ ಸಂಪಾದಿಸುತ್ತಾರೆ. ಆದರೆ ಅವರಿಗೆ ಆದಾಯ ತೆರಿಗೆ ಇಲಾಖೆಯಿಂದ 37.5 ಲಕ್ಷ ರೂ. ಬಾಕಿ ಪಾವತಿಸುವಂತೆ ನೋಟಿಸ್ ಬಂದಿದೆ. ನೋಟಿಸ್ ನೋಡಿ ಆಘಾತಗೊಂಡ ಗಿರೀಶ್ ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಮೇಲ್ನೋಟಕ್ಕೆ ಇದೊಂದು ವಂಚನೆ ಪ್ರಕರಣ ಎಂದು ಗೊತ್ತಾಗುತ್ತಿದೆ ಎಂದು ಅಲೌಲಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಪುರೇಂದ್ರ ಕುಮಾರ್ ತಿಳಿಸಿದ್ದಾರೆ.
ರಾಜಸ್ಥಾನದ ಕಂಪೆನಿಯೊಂದರ ಜೊತೆ ಗಿರೀಶ್ ಸಂಬಂಧ ಹೊಂದಿರುವುದಾಗಿ ನೋಟಿಸ್ನಲ್ಲಿದೆ. ಆದರೆ ಅಸಲಿಗೆ ಅವರು ಯಾವುದೇ ಕಂಪೆನಿಯೊಂದಿಗೆ ಸಂಬಂಧ ಹೊಂದಿಲ್ಲ. ದೆಹಲಿಯಲ್ಲಿ ಸಣ್ಣಪುಟ್ಟ ಕೆಲಸಗಳನ್ನು ನಿರ್ವಹಿಸುವ ಗಿರೀಶ್ ದಳ್ಳಾಳಿಯೊಬ್ಬರ ಮುಖಾಂತರ ಪಾನ್ ಕಾರ್ಡ್ ಮಾಡಿಸಲು ಪ್ರಯತ್ನಿಸಿದ್ದು, ಬಳಿಕ ಆತನನ್ನು ಏನೂ ಕೇಳಿಲ್ಲವೆಂಬುದಾಗಿ ತಿಳಿದು ಬಂದಿದೆ. ನೋಟಿಸ್ನ್ನು ಅವರ ಪಾನ್ ಕಾರ್ಡ್ ಸಂಖ್ಯೆಯ ವಿರುದ್ದವೇ ನೀಡಲಾಗಿದೆ.