ನವದೆಹಲಿ, ನ 11 (DaijiworldNews/DB): ಆಡಳಿತ ನಡೆಸುವವರಿಗೆ ಮತ ನೀಡಿ, ಬೆಳವಣಿಗೆ ತಡೆಯುವವರಿಗಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ರ ಕೇಜ್ರೀವಾಲ್ ಮನವಿ ಮಾಡಿದ್ದಾರೆ.
ಡಿಸೆಂಬರ್ 4ರಂದು ನಡೆಯಲಿರುವ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗೆ ಪೂರ್ವಭಾವಿಯಾಗಿ 10 ಭರವಸೆಗಳನ್ನು ಪ್ರಕಟಿಸಿ ಮಾತನಾಡಿದ ಅವರು, ದೆಹಲಿಯನ್ನು ಸ್ವಚ್ಛ, ಸುಂದರ ನಗರವಾಗಿಸುವ ಕಲ್ಪನೆ ನಮ್ಮದು. ಕಸ, ಕೊಳಕುಮುಕ್ತವಾಗಿಸುವುದು, ಕಸ ವಿಲೇವಾರಿಗೆ ಆದ್ಯತೆ ನಮ್ಮ ಉದ್ದೇಶ. ದೆಹಲಿಯ ರಸ್ತೆ, ಪಥಗಳ ಸ್ವಚ್ಛತೆ, ಎಂಸಿಡಿ ಅಧೀನದ ಶಾಲೆ, ಆಸ್ಪತ್ರೆಗಳ ನವೀಕರಣ ಶತಸಿದ್ದ ಎಂದು ಭರವಸೆ ನೀಡಿದರು.
ಭ್ರಷ್ಟಾಚಾರಮುಕ್ತ ಎಂಸಿಡಿ ನಮ್ಮ ಧ್ಯೇಯ. ಕಟ್ಟಡ ಯೋಜನೆಗಳನ್ನು ಪಾರದರ್ಶಕ, ಸರಳಗೊಳಿಸುವುದು, ಸಣ್ಣ ಪುಟ್ಟ ಉಲ್ಲಂಘನೆಗಳನ್ನು ಕ್ರಮಬದ್ದವಾಗಿಸುವ ಉದ್ದೇಶ ಹೊಂದಿದ್ದೇವೆ. ಇದರಿಂದ ಜನರನ್ನು ಬ್ಲಾಕ್ಮೇಲ್ ಮಾಡುವ ತಂತ್ರಗಳನ್ನು ತಡೆಯಬಹುದು ಎಂದರು.
ಪಾರ್ಕಿಂಗ್ ಸಮಸ್ಯೆ ಪರಿಹಾರ, ಬೀದಿನಾಯಿ, ಹಸು, ಕೋತಿಗಳು ನಗರಕ್ಕೆ ಬಾರದಂತೆ ನೋಡಿಕೊಳ್ಳುವುದು, ಉದ್ಯಾನ ನಿರ್ಮಾಣ, ತಾತ್ಕಾಲಿಕ ನಾಗರಿಕ ಉದ್ಯೋಗಿಗಳನ್ನು ದೃಢೀಕರಿಸಿ, ಸರಿಯಾಗಿ ಸಂಬಳ ನೀಡುವುದು ಸೇರಿದಂತೆ ಹಲವು ಭರವಸೆಗಳನ್ನು ನೀಡಬಲ್ಲೆ ಮತ್ತು ಅದನ್ನು ಕಾರ್ಯರೂಪಕ್ಕೆ ತರುತ್ತೇವೆ ಎಂದು ಕೇಜ್ರೀವಾಲ್ ತಿಳಿಸಿದರು.