ಇಂಧೋರ್, ನ 11 (DaijiworldNews/DB): ಕೈ ನೋವನ್ನು ಗುಣಪಡಿಸುವ ದೃಷ್ಟಿಯಿಂದ ಯುವಕನೋರ್ವ ಯೂಟ್ಯೂಬ್ ನೋಡಿಕೊಂಡು ಸೋರೆಕಾಯಿ ಜ್ಯೂಸ್ ಮಾಡಿ ಕುಡಿದು ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ಇಂದೋರ್ ಜಿಲ್ಲೆಯಲ್ಲಿ ನಡೆದಿದೆ.
ಧರ್ಮೇಂದ್ರ ಮೃತ ಯುವಕ. ಕೈ ನೋವಿನಿಂದ ಬಳಲುತ್ತಿದ್ದ ಧರ್ಮೇಂದ್ರ ಕೈ ನೋವು ಗುಣಪಡಿಸುವ ಬಗೆಯನ್ನು ಯೂಟ್ಯೂಬ್ನಲ್ಲಿ ಹುಡುಕಾಡಿದ್ದಾರೆ. ಈ ವೇಳೆ ಸೋರೆಕಾಯಿ ಜ್ಯೂಸ್ ಸೇವನೆಯಿಂದ ಕೈ ನೋವು ಶಮನವಾಗುವುದರ ಬಗ್ಗೆ ನೋಡಿದ್ದು, ಅದರಲ್ಲಿರುವ ಪ್ರಿಸ್ಕ್ರಿಪ್ಶನ್ ಪ್ರಕಾರ ಅವರು ಸೋರೆಕಾಯಿ ಜ್ಯೂಸ್ ತಯಾರಿಸಿ ಕುಡಿದಿದ್ದಾರೆ. ಸ್ವಲ್ಪ ಹೊತ್ತಿನಲ್ಲಿ ಅವರ ಆರೋಗ್ಯ ಹದಗೆಟ್ಟಿದ್ದು, ಮನೆಯವರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಸಾವನ್ನಪ್ಪಿದ್ದಾರೆ.
ಮೃತ ಯುವಕನ ಕುಟುಂಬದವರು ಯುವಕ ಸೋರೆಕಾಯಿ ಜ್ಯೂಸ್ ಸೇವಿಸಿರುವ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಶವದ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದ್ದು, ವರದಿ ಬಂದ ಬಳಿಕವಷ್ಟೇ ಸಾವಿಗೆ ನೈಜ ಕಾರಣ ತಿಳಿಯಲಿದೆ ಎಂದು ಪೊಲೀಸರು ಹೇಳಿದ್ದಾರೆ.