ಪಟಿಯಾಲ (ಪಂಜಾಬ್), ನ 10 (DaijiworldNews/DB): ಇಂದು ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ಐಸಿಸಿ ಟಿ-20 ವಿಶ್ವಕಪ್ ಸೆಮಿಫೈನಲ್ ಪಂದ್ಯ ವೀಕ್ಷಣೆಗೆ ದೇಶಾದ್ಯಂತ ಜನರು ಕಾದು ಕುಳಿತಿದ್ದರು. ಇನ್ನು ಪಂದ್ಯ ನೋಡಲೆಂದು ಪಟಿಯಾಲದಲ್ಲಿ ವಕೀಲರು ನ್ಯಾಯಾಲಯ ಕಲಾಪಕ್ಕೇ ರಜೆ ಹಾಕಿದ್ದಾರೆ!
ಆಸ್ಟ್ರೇಲಿಯಾದ ಅಡಿಲೇಡ್ನಲ್ಲಿ ಇಂದು (ಗುರುವಾರ) ಭಾರತ ಹಾಗೂ ಇಂಗ್ಲೆಂಡ್ ನಡುವೆ ಜಿದ್ದಾಜಿದ್ದಿನ ಸೆಣಸಾಟ ನಡೆದಿತ್ತು. ಪಂದ್ಯ ನೋಡಲೆಂದು ದೇಶದ ಹಲವರು ಟಿವಿ ಮುಂದೆ ಕಾದು ಕುಳಿತಿದ್ದರೆ, ಪಟಿಯಾಲ ಜಿಲ್ಲೆಯ ಬಾರ್ ಅಸೋಸಿಯೇಶನ್ನ ವಕೀಲರು ಮಧ್ಯಾಹ್ನದ ಬಳಿಕ ಪಂದ್ಯ ವೀಕ್ಷಣೆಗೆಂದೇ ನ್ಯಾಯಾಲಯದ ಕಲಾಪಗಳಿಗೆ ರಜೆ ಮಾಡಿದ್ದಾರೆ. ಇನ್ನು ಭೋಜನ ವಿರಾಮದ ಬಳಿಕ ಬಾರ್ ಅಸೋಸಿಯೇಶನ್ ಅಧ್ಯಕ್ಷ ಜಿತೇಂದ್ರ ಪಾಲ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಸಿ ಈ ನಿರ್ಧಾರವನ್ನು ಕೈಗೊಳ್ಳಲಾಗಿತ್ತಂತೆ.
ಗುರುವಾರ ಮಧ್ಯಾಹ್ನ ಕೆಲವು ಪ್ರಕರಣಗಳ ವಿಚಾರಣೆ ನಡೆಯುವುದರಲ್ಲಿತ್ತು. ಆದರೆ ಅವುಗಳನ್ನು ಬೇರೆ ದಿನಕ್ಕೆ ವರ್ಗಾಯಿಸುವಂತೆ ವಕೀಲರ ಪರಿಷತ್ತು ನ್ಯಾಯಾಲಯವನ್ನು ಕೋರಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಇನ್ನು ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ಸೆಮಿ ಫೈನಲ್ನಲ್ಲಿ ಭಾರತ ತಂಡವು ಇಂಗ್ಲೆಂಡ್ ವಿರುದ್ದ ಸೋಲನುಭವಿಸಿದ್ದು, ಆಂಗ್ಲರ ತಂಡ ಫೈನಲ್ಗೆ ಲಗ್ಗೆ ಇಟ್ಟಿದೆ.