ನವದೆಹಲಿ, ನ 10 (DaijiworldNews/DB): ಮೂತ್ರಪಿಂಡದ ಕಾಯಿಲೆ ಮತ್ತಿತರ ಅನಾರೋಗ್ಯದಿಂದ ಬಳಲುತ್ತಿರುವ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಪುತ್ರಿ ರೋಹಿಣಿ ಆಚಾರ್ಯ ಕಿಡ್ನಿ ದಾನಕ್ಕೆ ಮುಂದಾಗಿದ್ದಾರೆ.
ಸಿಂಗಾಪುರದಲ್ಲಿರುವ ಲಾಲು ಎರಡನೇ ಪುತ್ರಿ ರೋಹಿಣಿ ಆಚಾರ್ಯ ತಮ್ಮ ತಂದೆಯ ಜೀವ ಉಳಿಸಲು ಮುಂದಾಗಿದ್ದು, ಎರಡು ಕಿಡ್ನಿಗಳ ಪೈಕಿ ಒಂದನ್ನು ತಂದೆಗೆ ದಾನ ಮಾಡಲು ಅವರು ಮುಂದಾಗಿದ್ದಾರೆ. ಅಕ್ಟೋಬರ್ನಲ್ಲಿ ಸಿಂಗಾಪುರದ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಕಿಡ್ನಿ ಕಸಿ ಮಾಡಿಸಿಕೊಳ್ಳುವಂತೆ ಲಾಲು ಪ್ರಸಾದ್ ಅವರಿಗೆ ವೈದ್ಯರು ಸಲಹೆ ನೀಡಿದ ಮೇರೆಗೆ ಮಗಳು ರೋಹಿಣಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಆದರೆ ಮಗಳ ಈ ನಿರ್ಧಾರಕ್ಕೆ ಮೊದಲು ಲಾಲು ಒಪ್ಪಿಗೆ ಸೂಚಿಸಲಿಲ್ಲ. ಬಳಿಕ ಆಕೆ ಮತ್ತು ಕುಟುಂಬದ ಒತ್ತಾಯದ ಮೇರೆಗೆ ಮಗಳ ಕಿಡ್ನಿಯನ್ನು ಪಡೆದುಕೊಳ್ಳಲು ಒಪ್ಪಿದರು ಎಂದು ತಿಳಿದು ಬಂದಿದೆ.
ಇನ್ನು ನವೆಂಬರ್ 20 ರಿಂದ 24ರೊಳಗೆ ಮತ್ತೆ ಲಾಲೂ ಪ್ರಸಾದ್ ಅವರು ಸಿಂಗಾಪುರಕ್ಕೆ ಭೇಟಿ ನೀಡಲಿದ್ದು, ಅದೇ ವೇಳೆ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆ ಇದೆ ಎನ್ನಲಾಗಿದೆ.