ಅಹಮದಾಬಾದ್, ನ 10 (DaijiworldNews/DB): 5 ರೂಪಾಯಿ ಕೆಲಸಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ 5 ಸಾವಿರ ರೂಪಾಯಿ ಖರ್ಚು ಮಾಡುತ್ತಾರೆ. ಖರ್ಚು ಮಾಡಿಯೇ ಪ್ರಚಾರ ಪಡೆಯುತ್ತಾರೆ ಎಂದು ಸಂಸದ ಹಾಗೂ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಗುಜರಾತ್ ವಿಧಾನಸಭೆ ಚುನಾವಣೆ 2022 ರ ಪ್ರಯುಕ್ತ ಅಹಮದಾಬಾದ್ನಲ್ಲಿ ಯುವಕರೊಂದಿಗಿನ ಸಂವಾದ ನಡೆಸಿದ ಅವರು, ಬಿಜೆಪಿಯಲ್ಲಿ ನಾವು 5 ಸಾವಿರ ರೂ.ಗಳ ಕೆಲಸ ಮಾಡುತ್ತೇವೆ. ಪ್ರಚಾರಕ್ಕೆ ಕೇವಲ 50 ರೂ. ಬಳಸಿಕೊಳ್ಳುತ್ತೇವೆ. ಆದರೆ ಆಮ್ ಆದ್ಮಿ ಪಕ್ಷದವರು ದೊಡ್ಡ ಮೊತ್ತದ ಹಣವನ್ನು ಪ್ರಚಾರಕ್ಕಾಗಿ ಖರ್ಚು ಮಾಡುತ್ತಿರುವುದು ದುರದೃಷ್ಟಕರ ಎಂದರು.
ಅರವಿಂದ ಕೇಜ್ರೀವಾಲ್ ಅವರು ಲಿಕ್ಕರ್ ಮಾಫಿಯಾದ ಸಹಕಾರದೊಂದಿಗೆ ಸರ್ಕಾರ ಶಾಲೆಗಳನ್ನು ನಡೆಸುತ್ತಿದ್ದಾರೆ ಎಂದು ಇದೇ ವೇಳೆ ಆರೋಪಿಸಿದ ಅವರು, ಗುಜರಾತ್ನಲ್ಲಿ ಪ್ರಧಾನಿ ಮೋದಿ ಮುಖ್ಯಮಂತ್ರಿಯಾಗಿದ್ದಾಗ ಶಾಲೆಯಿಂದ ಹೊರಗುಳಿಯುವ ಮಕ್ಕಳ ಅನುಪಾತವನ್ನು ಗಣನೀಯವಾಗಿ ಸುಧಾರಿಸಿದ್ದಾರೆ. ಅವರ ಪ್ರಯತ್ನದಿಂದಾಗಿ ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆ ಶೇ.30ರಿಂದ ಕೇವಲ ಶೇ.1ಕ್ಕೆ ಇಳಿದಿರುವುದು ಅವರ ಸಾಧನೆಯಾಗಿದೆ ಎಂದು ಬಣ್ಣಿಸಿದರು.