ಚಿಕ್ಕಬಳ್ಳಾಪುರ, ನ 10 (DaijiworldNews/HR): ಐವರು ದರೋಡೆಕೋರರ ತಂಡವೊಂದು ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಎಎಸ್ಐ) ಮನೆಗೆ ನುಗ್ಗಿ ಅವರ ಮಗನಿಗೆ ಗುಂಡು ಹಾರಿಸಿ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಪೆರೇಸಂದ್ರ ಗ್ರಾಮದಲ್ಲಿ ನಡೆದಿದೆ.
ಎಎಸ್ ಐ ನಾರಾಯಣಸ್ವಾಮಿ ಅವರ ಪುತ್ರ ಶರತ್ ಮೇಲೆ ದರೋಡೆಕೋರರು ಮೂರು ಗುಂಡು ಹಾರಿಸಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ಪೊಲೀಸರ ಪ್ರಕಾರ, ಕಳ್ಳರು ನಾರಾಯಣಸ್ವಾಮಿ ಮನೆಗೆ ನುಗ್ಗಿ ಪಿಸ್ತೂಲ್ ತೋರಿಸಿ ಆತನಿಗೆ, ಪತ್ನಿ ಮತ್ತು ಸೊಸೆಗೆ ಬೆದರಿಕೆ ಹಾಕಿದ್ದಾರೆ. ನಾರಾಯಣಸ್ವಾಮಿಯನ್ನು ಮನೆಯಿಂದ ಹೊರಕ್ಕೆ ತಳ್ಳಿದ ಕಳ್ಳರು, ಯಾರಿಗಾದರೂ ಹೇಳಿದರೆ ಕುಟುಂಬಸ್ಥರು ಬದುಕುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಮನೆಯಲ್ಲಿದ್ದ ಶರತ್ ಕುಟುಂಬದವರನ್ನು ರಕ್ಷಿಸಲು ಮುಂದಾದಾಗ ದರೋಡೆಕೋರರು ಗುಂಡಿನ ದಾಳಿ ನಡೆಸಿದ್ದು, ದರೋಡೆಕೋರರು ಅವರ ಬಳಿಯಿದ್ದ ಚಿನ್ನಾಭರಣ, ಚಿನ್ನಾಭರಣ ಹಾಗೂ ನಗದು ದೋಚಿ ನಾಪತ್ತೆಯಾಗಿದ್ದಾರೆ.