ಮುಂಬೈ, ನ 10 (DaijiworldNews/DB): 'ಇಂತಹ ರಾಜಕೀಯ ದ್ವೇಷವನ್ನು ಎಂದಿಗೂ ನಾವು ನೋಡಿರಲಿಲ್ಲ' ಇದು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮೂರೂವರೆ ತಿಂಗಳು ಜೈಲಿನಲ್ಲಿದ್ದು, ನಿನ್ನೆ ಜಾಮೀನಿನ ಮೇಲೆ ಬಿಡುಗಡೆಗೊಂಡ ಶಿವಸೇನೆ ನಾಯಕ ಸಂಜಯ್ ರಾವುತ್ ಅವರ ಮೊದಲ ಪ್ರತಿಕ್ರಿಯೆ.
ಇಂದು (ಗುರುವಾರ) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರ ಮೇಲೆ ಯಾವುದೇ ದೂರಿಲ್ಲ. ಕೇಂದ್ರೀಯ ತನಿಖಾ ಸಂಸ್ಥೆಗಳನ್ನೂ ದೂಷಣೆ ಮಾಡುವುದಿಲ್ಲ. ಆದರೆ ಇಷ್ಟು ಕೀಳು ಮಟ್ಟದ ರಾಜಕೀಯ ದ್ವೇಷವನ್ನು ಹಿಂದೆಂದೂ ನಾವು ನೋಡಿರಲಿಲ್ಲ ಎಂದರು.
ಇಂದು ಶಿವಸೇನೆ ಮುಖ್ಯಸ್ಥ ಉದ್ದವ್ ಠಾಕ್ರೆ ಹಾಗೂ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾಗುತ್ತೇನೆ ಎಂದ ಅವರು, ಮಹಾರಾಷ್ಟ್ರದಲ್ಲಿ ರಚನೆಯಾಗಿರುವ ಹೊಸ ಸರ್ಕಾರದ ಕೆಲವು ಒಳ್ಳೆಯ ನಿರ್ಧಾರಗಳನ್ನು ಸ್ವಾಗತಿಸುತ್ತೇನೆ. ಡಿಸಿಎಂ ದೇವೇಂದ್ರ ಫಡ್ನವೀಸ್ ಅವರ ಕೆಲವು ನಿರ್ಧಾರಗಳು ಉತ್ತಮವಾಗಿವೆ, ಬಹುಶಃ ರಾಜ್ಯವನ್ನು ಫಡ್ನವಿಸ್ ಮುನ್ನಡೆಸುತ್ತಿದ್ದಾರೆ ಎಂದೇ ಎನಿಸುತ್ತಿದೆ ಎಂದು ಇದೇ ವೇಳೆ ತಿಳಿಸಿದರು.