ರಾಂಚಿ, ನ 10 (DaijiworldNews/DB): ಸಾಲಬಾಧೆಯಿಂದ ಬಳಲುತ್ತಿದ್ದ ಕುಟುಂಬವೊಂದು ಸಾಲ ವಸೂಲಾತಿಗಾರರ ಕಿರುಕುಳದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿಹಾರದಲ್ಲಿ ನಡೆದಿದೆ.
ನವಾಡಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನ್ಯೂ ಏರಿಯಾ ಮೊಹಲ್ಲಾದಲ್ಲಿ ಘಟನೆ ಸಂಭವಿಸಿದ್ದು, ಒಂದೇ ಕುಟುಂಬದ ಐದು ಮಂದಿ ಸಾವಿಗೆ ಶರಣಾಗಿದ್ದಾರೆ. ಮೃತರನ್ನು ಕೇದಾರ್ ಲಾಲ್ ಗುಪ್ತಾ, ಅವರ ಪತ್ನಿ ಅನಿತಾ ಕುಮಾರಿ ಮತ್ತು ಮೂವರು ಮಕ್ಕಳಾದ ಪ್ರಿನ್ಸ್ ಕುಮಾರ್, ಶಬ್ನಮ್ ಕುಮಾರಿ ಮತ್ತು ಗುಡಿಯಾ ಕುಮಾರಿ ಎಂದು ಗುರುತಿಸಲಾಗಿದೆ. ಘಟನೆ ನಡೆದ ಕೂಡಲೇ ಎಲ್ಲರನ್ನೂ ಪಾವಪುರಿ ವಿನ್ಸ್ಗೆ ಕಳುಹಿಸಲಾಯಿತು. ಬಳಿಕ ಅಲ್ಲಿಂದ ನವಾಡಾ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ಸ್ಥಿತಿ ಚಿಂತಾಜನಕವಾಗಿದ್ದರಿಂದ ಪಾಟ್ನಾದ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಎಲ್ಲರೂ ಸಾವನ್ನಪ್ಪಿದರು ಎಂದು ತಿಳಿದು ಬಂದಿದೆ.
ಕುಟುಂಬವು ಸಾಲಬಾಧೆಯಿಂದ ಬಳಲುತ್ತಿದ್ದು, ವಿಪರೀತ ಸಾಲ ಮಾಡಿಕೊಂಡಿತ್ತು. ಸಾಲ ನೀಡಿದವರು ವಸೂಲಾತಿಗಾಗಿ ಕಿರುಕುಳದಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ - 9152987821