ಬೆಂಗಳೂರು, ನ 10 (DaijiworldNews/DB): ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ್ 11ರಂದು ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ರಸ್ತೆ ಗುಂಡಿ ಮುಚ್ಚುತ್ತಿರುವ ರಾಜ್ಯ ಬಿಜೆಪಿ ಸರ್ಕಾರಕ್ಕೆ ಆಮ್ ಆದ್ಮಿ ಪಕ್ಷದ ರಾಜ್ಯ ಘಟಕ ಚಾಟಿ ಬೀಸಿದೆ. ಧನ್ಯವಾದಗಳು ಮೋದಿಯವರೇ ತಿಂಗಳಿಗೊಮ್ಮೆ ಬರ್ತಾ ಇರಿ ಎಂದು ಎಎಪಿ ವ್ಯಂಗ್ಯವಾಡಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಎಎಪಿ ರಾಜ್ಯ ಘಟಕ, ಮಾಡುವುದು 40 ಪರ್ಸೆಂಟ್ ಅನಾಚಾರ, ಮೋದಿ ಬಂದಾಗ ಮಾಡ್ತಾರೆ ಬೃಂದಾವನ. ಇಷ್ಟೇ ಯಾಕೆ , ಬಿಟ್ರೆ ಅಕ್ಕಪಕ್ಕ ಏನು ಕಾಣದಂತೆ ಬಿಳಿಯ ಬಟ್ಟೆ ಕಟ್ಟಿ ಬಿಡುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಣ್ಣಿಗೆ ಬಟ್ಟೆ ಕಟ್ಟಿದ್ದರು. ಬಿಜೆಪಿಯವರು ಮೋದಿ ಕಣ್ಣಿಗೆ ಬಟ್ಟೆ ಕಟ್ಟೋ ಮನೋಭಾವದವರು ಎಂದು ಲೇವಡಿ ಮಾಡಿದೆ.
'ಬನ್ನಿ ಮೋದಿ ನಮ್ಮ ಊರಿಗೆ... ಟಾರು ಕಾಣದ ನಮ್ಮ ಬೀದಿಗೆ... 40-80 ಪರ್ಸೆಂಟ್ ನುಂಗಿದ ನಿಮ್ಮ ಬಿಜೆಪಿ ನಾಯಕರ ಭ್ರಷ್ಟಾಚಾರದ ತವರಿಗೆ, ಹೇಳಿಬಿಡಿ ನಿಮ್ಮದೆಷ್ಟು - ನಿಮ್ಮ ಕೋರ್ ಕಮಿಟಿಗೆಷ್ಟು?' ಎಂದು ಎಎಪಿ ಪ್ರಶ್ನಿಸಿದೆ.
ವಾರಕ್ಕೊಮ್ಮೆ ಬನ್ನಿ, ಟಾರು ಸಿಮೆಂಟ್ ತನ್ನಿ, ಮೋದಿಯವರೇ ತಿಂಗಳಿಗೊಮ್ಮೆ ಬರ್ತಾ ಇರಿ ಎಂದೆಲ್ಲ ಟ್ವೀಟ್ನಲ್ಲಿರುವ ಫೋಟೋದಲ್ಲಿ ಉಲ್ಲೇಖಿಸಿ ಎಎಪಿ ವ್ಯಂಗ್ಯವಾಡಿದೆ. ಬೊಮ್ಮಾಯಿಗುಂಡಿಮುಚ್ಚಿಸಿದರುಮೋದಿ ಎಂಬ ಹ್ಯಾಷ್ಟ್ಯಾಗ್ ಬಳಸಿ ಕುಹಕವಾಡಿದೆ.