ನವದೆಹಲಿ, ನ 09 (DaijiworldNews/DB): ಹಿಮಾಚಲಪ್ರದೇಶದಂತಹ ಗುಡ್ಡಗಾಡು ರಾಜ್ಯ ಅಭಿವೃದ್ದಿಯಾಗಬೇಕಾದರೆ ಡಬಲ್ ಎಂಜಿನ್ ಸರ್ಕಾರ ತೀರಾ ಅತ್ಯಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಶಾಹಪುರ್ ಪಟ್ಟಣದಲ್ಲಿ ಚಂಬಿ ಮೈದಾನದಲ್ಲಿ ಚುನಾವಣೆ ಸಮಾವೇಶ ಉದ್ದೇಶಿಸಿ ಬುಧವಾರ ಮಾತನಾಡಿದ ಅವರು, ಅಭಿವೃದ್ದಿಯನ್ನು ಬಿಜೆಪಿ ಸದಾ ಬಯಸುತ್ತದೆ. ಸ್ಥಿರ ಸರ್ಕಾರಕ್ಕಾಗಿ ಇಲ್ಲಿನ ಜನ ಬಿಜೆಪಿಗೆ ಮತ ಹಾಕಬೇಕು. ಡಬಲ್ ಎಂಜಿನ್ ಸರ್ಕಾರ ಇಲ್ಲಿಗೆ ತೀರಾ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಭ್ರಷ್ಟಾಚಾರ, ಹಗರಣಗಳ ಮೂಲಕ ರಾಜ್ಯದ ಅಭಿವೃದ್ದಿಯನ್ನೇ ಕಾಂಗ್ರೆಸ್ ಕುಂಠಿತಗೊಳಿಸಿತ್ತು. ಕಳೆದ ಹತ್ತು ವರ್ಷಗಳಿಂದ ಆ ಪಕ್ಷ ಇಲ್ಲಿ ಅಧಿಕಾರಕ್ಕಾಗಿ ಹಪಹಪಿಸುತ್ತಿದ್ದರೂ, ಮತದಾರರು ಆ ಪಕ್ಷವನ್ನು ನಿರ್ಲಕ್ಷಿಸುತ್ತಿದ್ದಾರೆ. ತಮಿಳುನಾಡು, ಬಿಹಾರ, ಆಂಧ್ರ, ತೆಲಂಗಾಣ, ಉತ್ತರ ಪ್ರದೇಶಗಳಲ್ಲಿಯೂ ಜನ ಹೇಗೆ ಆ ಪಕ್ಷವನ್ನು ನಿರ್ಲಕ್ಷಿಸಿದ್ದಾರೆಂಬುದನ್ನು ನೀವು ನೋಡಿರಬಹುದು ಎಂದರು.