ನವದೆಹಲಿ, ನ 09 (DaijiworldNews/MS): "ರಾಜಕೀಯ ಪ್ರವಾಸದಲ್ಲಿ ಬ್ಯುಸಿಯಾಗಿರುವ ಪಾರ್ಟ್ ಟೈಮ್ ಮುಖ್ಯಮಂತ್ರಿ ದೆಹಲಿಗೆ ಬೇಕಾಗಿಲ್ಲ" ಎಂದು ವಿದೇಶಾಂಗ ವ್ಯವಹಾರ ಮತ್ತು ಸಂಸ್ಕೃತಿ ರಾಜ್ಯ ಸಚಿವ ಮೀನಾಕ್ಷಿ ಲೇಖಿ ಇಂದು ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸಚಿವೆ, "ಈ ವ್ಯಕ್ತಿ ಏನನ್ನೂ ಮಾಡುತ್ತಿಲ್ಲ. ಚುನಾವಣೆ ಸಿದ್ದವಾಗುತ್ತಿರುವ ರಾಜ್ಯಗಳಲ್ಲಿ ಪ್ರಚಾರಕ್ಕಾಗಿ ರಾಜಕೀಯ ಪ್ರವಾಸದಲ್ಲಿ ತನ್ನ ಸಮಯವನ್ನು ಕಳೆಯುವ ಅರೆಕಾಲಿಕ ಮುಖ್ಯಮಂತ್ರಿ ದೆಹಲಿಗೆ ಅಗತ್ಯವಿಲ್ಲ. ಯಾಕೆಂದರೆ ಅವರು ರಾಜ್ಯದ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ ಆದರೆ ಪ್ರವಾಸದಲ್ಲಿ ಮಾತ್ರ ನಿರತರಾಗಿರುತ್ತಾರೆ " ಎಂದು ಹೇಳಿದರು.
ಕೇಜ್ರಿವಾಲ್ ಸರ್ಕಾರವು ನಿಷ್ಕ್ರಿಯವಾಗಿದ್ದು ತನ್ನ "ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯ ವೃದ್ಧರು ಮತ್ತು ಮಕ್ಕಳು ವಾಯುಮಾಲಿನ್ಯ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿದ್ದಾರೆ .
ಈ ಹಿಂದೆ ರಾಜಧಾನಿಯಲ್ಲಿ 10 ಸ್ಮಾಗ್ ಟವರ್ಗಳನ್ನು ನಿರ್ಮಿಸುವುದಾಗಿ ಭರವಸೆ ನೀಡಿದ್ದರು ಆದರೆ ₹ 22 ಕೋಟಿ ವೆಚ್ಚದಲ್ಲಿ ಒಂದನ್ನು ನಿರ್ಮಿಸಲಾಗಿದೆ. ಅದರ ನಿರ್ವಹಣೆಗೆ ಪ್ರತಿ ತಿಂಗಳು ₹ 80 ಲಕ್ಷ ಖರ್ಚು ಮಾಡಿದರೂ ಅದು ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಕಳೆದ ಏಳು ವರ್ಷಗಳಲ್ಲಿ ಪರಿಸರ ಸೆಸ್ ಸಂಗ್ರಹಿಸಲಾದ ಮೊತ್ತ₹ 1,286 ಕೋಟಿ, ಆದರೆ ಕೇಜ್ರಿವಾಲ್ ಸರ್ಕಾರವು ಮಾಲಿನ್ಯದ ವಿರುದ್ಧ ಹೋರಾಡಲು ₹ 272 ಕೋಟಿಗಿಂತ ಸ್ವಲ್ಪ ಹೆಚ್ಚು ಖರ್ಚು ಮಾಡಿದೆ ಎಂದು ಆರ್ ಟಿ ಐ ಮಾಹಿತಿ ಉಲ್ಲೇಖಿಸಿ ದೂರಿದರು.