ಬೆಂಗಳೂರು, ನ 09 (DaijiworldNews/DB): ರಾಷ್ಟ್ರೀಯ ಪಕ್ಷಗಳೆರಡು ಧರ್ಮ, ಜಾತಿಯ ಹೆಸರಿನಲ್ಲಿ ಜನರ ಮನಸ್ಸು ಕೆಡಿಸುವ ಕೆಲಸ ಮಾಡುತ್ತಿವೆ. ಆ ಎರಡು ಪಕ್ಷಗಳ ನಾಯಕರಿಗೆ ಅಭಿವೃದ್ದಿ ಬೇಕಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಬಸವನಗುಡಿಯಲ್ಲಿ ಜೆಡಿಎಸ್ ಕಚೇರಿ ಲೋಕಾರ್ಪಣೆಗೂ ಹಿಂದೂ ಪದ ಅಶ್ಲೀಲ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿ ಚುನಾವಣೆ ರಾಜಕೀಯ ಮಾಡುವುದರಲ್ಲೇ ನಿರತವಾಗಿವೆ. ಸೂಕ್ಷ್ಮ ವಿಚಾರಗಳ ಮೂಲಕ ಜನರ ಮನಸ್ಸು ಕೆಡಿಸುವುದೇ ಅವರ ಉದ್ದೇಶ ಹೊರತು, ರಾಜ್ಯದ ಅಭಿವೃದ್ದಿ ಅಲ್ಲ ಎಂದು ಕಿಡಿ ಕಾರಿದರು.
ಜನರ ಸಮಸ್ಯೆ ಆಲಿಸಲು ಎರಡೂ ಪಕ್ಷಗಳ ನಾಯಕರು ತಯಾರಿಲ್ಲ. ನಾನು ಹೊಡೆದಂಗೆ ಮಾಡುತ್ತೇನೆ, ನೀನು ಅತ್ತಂಗೆ ಮಾಡು ಎಂಬಂತೆ ಆ ಎರಡು ಪಕ್ಷಗಳು ನಡೆದುಕೊಳ್ಳುತ್ತಿವೆ. ಜನರಿಗೆ ಇವರ ಯೋಗ್ಯತೆಯ ಬಗ್ಗೆ ತಿಳಿದಿದೆ ಎಂದರು.
ಬಳಿಕ ನೆಟ್ಕಲ್ಲಪ್ಪ ವೃತ್ತದಲ್ಲಿರುವ ಶ್ರೀ ಗಣಪತಿ ದೇವಾಲಯದಲ್ಲಿ ಪೂಜೆ ನೆರವೇರಿಸಿದ ಎಚ್ಡಿಕೆ, ಮೆರವಣಿಗೆ ಮೂಲಕ ಎನ್ ಆರ್ ಕಾಲೊನಿ, ಹನುಮಂತ ನಗರ, ಶ್ರೀನಗರ ಬಸ್ ನಿಲ್ದಾಣ, ಪಿಇ ಎಸ್ ಕಾಲೇಜು, ಹನುಮಂತನಗರ ಮುಖ್ಯರಸ್ತೆ, ಸೀತಾ ಸರ್ಕಲ್ ವರೆಗೆ ಸುಮಾರು 8 ಕಿ.ಮೀ. ದೂರ ಸಾಗಿದರು.
ಬಸವನಗುಡಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ದೃಷ್ಟಿಯಿಂದ ಪಕ್ಷದ ಮುಖಂಡ ಬಾಗೇಗೌಡ ಹಾಗೂ ವಿಧಾನ ಪರಿಷತ್ ಸದಶ್ಯ ಟಿ.ಎ. ಶರವಣ ನೇತೃತ್ವದಲ್ಲಿ ಇಂದಿನಿಂದ ಮನೆಮನೆ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪಕ್ಷದ ಅಭ್ಯರ್ಥಿ ಅರಮನೆ ಶಂಕರ್ ಗೆಲುವಿಗಾಗಿ ನಿರಂತರ ಶ್ರಮಿಸಲಾಗುವುದು ಎಂದವರು ತಿಳಿಸಿದರು.