ಚೆನ್ನೈ, ನ 09 (DaijiworldNews/DB): ವ್ಯಕ್ತಿಯೊಬ್ಬ ನಕಲಿ ಬ್ಯಾಂಕ್ ತೆರೆದು ಜನರಿಗೆ ಲಕ್ಷಾಂತರ ರೂ. ವಂಚನೆ ಎಸಗುತ್ತಿದ್ದ ಘಟನೆ ಚೆನ್ನೈನ ಅಂಬತ್ತೂರಿನಲ್ಲಿ ನಡೆದಿದೆ. ಕೊನೆಗೂ ಈತ ಪೊಲೀಸ್ ಅತಿಥಿಯಾಗಿದ್ದಾನೆ.
ಚಂದ್ರಬೋಸ್ (44) ಬಂಧಿತ ಆರೋಪಿ. ಈತ ಚೆನ್ನೈನ ಅಂಬತ್ತೂರಿನಲ್ಲಿ ಸ್ವಂತ ಬ್ಯಾಂಕ್ ತೆರೆದು ವಿವಿಧ ಜಿಲ್ಲೆಗಳಲ್ಲಿ 9 ಶಾಖೆಗಳನ್ನೂ ಆರಂಭಿಸಿದ್ದ. ಈತನ ವ್ಯವಹಾರ ನಕಲಿ ಎಂದು ತಿಳಿಯದೇ 3 ಸಾವಿರ ಮಂದಿ ಈ ನಕಲಿ ಬ್ಯಾಂಕಿನಲ್ಲಿ ಖಾತೆಗಳನ್ನು ತೆರೆದಿದ್ದರು. ಖಾತೆ ತೆರೆಯಲು ಚಂದ್ರಬೋಸ್ ಪ್ರತಿ ಗ್ರಾಹಕರಿಂದ 700 ರೂ. ಶುಲ್ಕ ವಸೂಲಿ ಮಾಡುತ್ತಿದ್ದ. ಖಾತೆದಾರರಿಗೆ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ಗಳನ್ನೂ ನೀಡಿದ್ದ.
ಇನ್ನು ಇತರೆ ಬ್ಯಾಂಕ್ಗಳಂತೆ ನಿಶ್ಚಿತ ಠೇವಣಿಗೆ ಹೆಚ್ಚು ಬಡ್ಡಿಯ ಆಸೆ ತೋರಿಸಿ ಜನರಿಂದ ಠೇವಣಿ ಪಡೆದುಕೊಂಡಿದ್ದ. ಆದರೆ ಈತನ ನಕಲಿ ವ್ಯವಹಾರದ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕಿನವರು ಮಾಹಿತಿ ನೀಡಿದ್ದು, ತನಿಖೆ ನಡೆಸಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ. ಆರ್ಬಿಐನ ಎಜಿಎಂ ಅವರೂ ಈ ಸಂಬಂಧ ದೂರು ದಾಖಲು ಮಾಡಿದ್ದಾರೆ ಎಂದು ಚೆನ್ನೈ ನಗರ ಪೊಲೀಸ್ ಆಯುಕ್ತ ಶಂಕರ್ ಜಿವಾಲ್ ತಿಳಿಸಿದ್ದಾರೆ.
ಆರ್ಬಿಐನ ನಕಲಿ ಪ್ರಮಾಣಪತ್ರಗಳನ್ನಿಟ್ಟುಕೊಂಡು ಈತ ವ್ಯವಹಾರ ನಡೆಸುತ್ತಿದ್ದ. ಠೇವಣಿ ಚೀಟಿಗಳು, ಹಣ ಹಿಂಪಡೆಯುವ ಚೀಟಿಗಳು, ನಗದು ಎಣಿಕೆ ಯಂತ್ರಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅಸಲಿ ಬ್ಯಾಂಕ್ನಲ್ಲಿ ನಡೆಯುವ ಎಲ್ಲಾ ವ್ಯವಹಾರಗಳನ್ನು ಈ ನಕಲಿ ಬ್ಯಾಂಕ್ನಲ್ಲಿ ನಡೆಸಲಾಗುತ್ತಿತ್ತು. ಸಾಲ ಸೌಲಭ್ಯ ನೀಡುವಿಕೆಯೂ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಮಧುರೈ, ವಿರುಧಾಚಲಂ, ಕಲ್ಲಕುರಿಚಿ, ನಾಮಕ್ಕಲ್, ಪೆರಂಬಲೂರ್, ಈರೋಡ್, ತಿರುವಣ್ಣಾಮಲೈ ಮತ್ತು ಸೇಲಂ ಸೇರಿದಂತೆ ತಮಿಳುನಾಡಿನ ಒಂಬತ್ತು ಸ್ಥಳಗಳಲ್ಲಿ ಶಾಖೆ ತೆರೆಯಲಾಗಿತ್ತು. ಸದ್ಯ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಬಂಧಿಸಲಾಗಿದ್ದು, ಇನ್ನಷ್ಟು ಮಂದಿಯನ್ನು ಬಂಧಿಸಲಾಗುವುದು. 56.6 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಶೀಘ್ರ ಇನ್ನಷ್ಟು ಹಣ ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದವರು ವಿವರಿಸಿದ್ದಾರೆ ಎಂದು ವರದಿಯಾಗಿದೆ.