ಭೋಪಾಲ್, ನ 09 (DaijiworldNews/DB): ಹೆದ್ದಾರಿ ಕಳಪೆ ಕಾಮಗಾರಿ ನೋಡಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಸಾರ್ವಜನಿಕರಲ್ಲಿ ಕ್ಷಮೆ ಯಾಚನೆ ಮಾಡಿದ ಪ್ರಸಂಗ ನಡೆದಿದೆ. ಅಲ್ಲದೆ ಹೊಸ ಗುತ್ತಿಗೆಗೆ ಆದೇಶವನ್ನೂ ನೀಡಿದ್ದಾರೆ.
400 ಕೋಟಿ ರೂ. ವೆಚ್ಚದಲ್ಲಿ ಮಧ್ಯಪ್ರದೇಶದ ಬರೇಲಾದಿಂದ ಮಂಡ್ಲಾವರೆಗೆ 63 ಕಿ.ಮೀ ಉದ್ದದ ರಸ್ತೆ ನಿರ್ಮಿಸಲಾಗಿತ್ತು. ಆದರೆ ಈ ರಸ್ತೆಯನ್ನು ವೀಕ್ಷಿಸಿದ ನಿತಿನ್ ಗಡ್ಕರಿ ಅವರಿಗೆ ರಸ್ತೆಯ ಗುಣಮಟ್ಟ ಸಮಾಧಾನ ತಂದಿಲ್ಲ. ನನಗೆ ರಸ್ತೆ ನಿರ್ಮಾಣ ತೃಪ್ತಿ ತಂದಿಲ್ಲ. ಇದರಿಂದ ಪಶ್ಚಾತ್ತಾಪ ಉಂಟಾಗಿದೆ. ರಸ್ತೆ ನಿರ್ಮಾಣದಲ್ಲಿ ತಪ್ಪಾಗಿದ್ದಲ್ಲಿ ಸಾರ್ವಜನಿಕರಲ್ಲಿ ಕ್ಷಮೆ ಯಾಚಿಸುವುದಕ್ಕೆ ನನಗೆ ಯಾವುದೇ ಹಿಂಜರಿಕೆ ಇಲ್ಲ ಎಂದಿದ್ದಾರೆ.
ಈ ಭಾಗದಲ್ಲಿ ಹಲವು ಸಮಸ್ಯೆಗಳಿವೆ ಎಂಬ ಬಗ್ಗೆ ಅಧಿಕಾರಿಗಳಲ್ಲಿ ಚರ್ಚಿಸಿ ತಿಳಿದುಕೊಂಡಿದ್ದೇನೆ. ಪರಸ್ಪರ ಚರ್ಚಿಸಿದ ನಂತರ ಯೋಜನೆ ಸ್ಥಗಿತಗೊಳಿಸಲು ಹೇಳಿದ್ದೇನೆ. ಹಳೆ ಕಾಮಗಾರಿಯನ್ನು ದುರಸ್ತಿಗೊಳಿಸಿ ಹೊಸ ಟೆಂಡರ್ ಕರೆಯಲಾಗುವುದು. ಶೀಘ್ರ ಜನರಿಗೆ ಉತ್ತಮ ರಸ್ತೆಯನ್ನು ನೀಡಲಾಗುವುದು ಎಂದು ಇದೇ ವೇಳೆ ಗಡ್ಕರಿ ತಿಳಿಸಿದರು.