ಕೋಲ್ಕತ್ತಾ, ನ 09 (DaijiworldNews/MS): ಪಶ್ಚಿಮ ಬಂಗಾಳದಲ್ಲಿ ಮುಂದಿನ ವರ್ಷ ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಅನ್ನು ಸೋಲಿಸಲು ಕೇಸರಿ ಪಾಳಯದೊಂದಿಗೆ ಕೈಜೋಡಿಸುವಂತೆ ಬಿಜೆಪಿ ಸಂಸದ ಸೌಮಿತ್ರಾ ಖಾನ್ ಮಂಗಳವಾರ ಕಾಂಗ್ರೆಸ್ ಮತ್ತು ಎಡರಂಗ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳನ್ನು ಒತ್ತಾಯಿಸಿದ್ದಾರೆ.ಆದರೆ ಖಾನ್ ಅವರ ಪ್ರಸ್ತಾವನೆಯನ್ನು ಕಾಂಗ್ರೆಸ್ ಮತ್ತು ಎಡಪಕ್ಷಗಳು ತಳ್ಳಿಹಾಕಿವೆ.
ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಕಾಂಗ್ರೆಸ್ ಹೇಳಿದೆ.
''ಗ್ರಾಮೀಣ ಚುನಾವಣೆಯಲ್ಲಿ ಬೂತ್ ಮಟ್ಟದಲ್ಲಿ ಟಿಎಂಸಿ ವಿರುದ್ಧ ಹೋರಾಟ ನಡೆಯಬೇಕು. ನಮಗೆ ಬೇಕಾಗಿರುವುದು ಟಿಎಂಸಿಯನ್ನು ಸೋಲಿಸುವುದು, ಮತ್ತು ಟಿಎಂಸಿ ವಿರುದ್ಧ ಹೋರಾಡಲು ಸಿದ್ಧರಿರುವ ಯಾರಾದರೂ ಅಥವಾ ಯಾವುದೇ ಶಕ್ತಿ ಕೈಜೋಡಿಸಬಹುದು. ಬೂತ್ ಮಟ್ಟದಲ್ಲಿ ಯಾರಾದರೂ ಟಿಎಂಸಿಯನ್ನು ಸೋಲಿಸಲು ಸಾಧ್ಯವಾದರೆ ಮತ್ತು ನಮ್ಮ ಬೆಂಬಲ ಅಗತ್ಯವಿದ್ದರೆ ನಾವು ಅವರನ್ನು ಬೆಂಬಲಿಸುತ್ತೇವೆ ಎಂದು ಸೌಮಿತ್ರಾ ಖಾನ್ ಹೇಳಿದ್ದಾರೆ. ಆದರೆ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ಯಾವುದೇ ಸಾಧ್ಯತೆ ಇಲ್ಲ ಎಂದು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.