ಲಖನೌ, ನ 09 (DaijiworldNews/DB): ಯುನಿಸೆಫ್ ಕಾರ್ಯಕ್ರಮಕ್ಕಾಗಿ ಉತ್ತರಪ್ರದೇಶ ರಾಜಧಾನಿ ಲಖನೌಗೆ ಆಗಮಿಸಿದ ಗ್ಲೋಬಲ್ ಸ್ಟಾರ್ ಮತ್ತು ಯುನಿಸೆಫ್ ಗುಡ್ವಿಲ್ ರಾಯಭಾರಿ, ನಟಿ ಪ್ರಿಯಾಂಕಾ ಚೋಪ್ರಾ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ಉತ್ತರ ಪ್ರದೇಶ ಸರ್ಕಾರವು ಮಹಿಳೆಯರ ಸಕಾರಾತ್ಮಕ ಬೆಳವಣಿಗೆಗೆ ಹೆಚ್ಚು ಒತ್ತು ನೀಡಿದೆ. ಇಂತಹ ಬದಲಾವಣೆ ಉತ್ತರ ಪ್ರದೇಶಕ್ಕೆ ತೀರಾ ಅಗತ್ಯವಿದೆ. ಇಲ್ಲಿ ಈಗ ಗರಿಷ್ಠ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ಶಾಲೆಗೆ ಹೋಗುತ್ತಿರುವುದು ಹೆಮ್ಮೆಯ ವಿಚಾರ ಎಂದು ಪತ್ರಕರ್ತರೊಂದಿಗೆ ಮಾತನಾಡುತ್ತಾ ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.
ಇನ್ನು ಮಕ್ಕಳ ಪೌಷ್ಠಿಕತೆಗೆ ಸಂಬಂಧಿಸಿದಂತೆ ಸಾಕಷ್ಟು ಕೆಲಸ ಮಾಡಲಾಗುತ್ತಿದೆ. ದೇಶದಲ್ಲೇ ಮೊದಲ ಪೌಷ್ಠಿಕಾಂಶ ಸಂಬಂಧಿತ ಅಪ್ಲಿಕೇಶನ್ನ್ನು ಇಲ್ಲಿ ಅಭಿವೃದ್ದಿಪಡಿಸಲಾಗಿದ್ದು, ಇದರಿಂದ ಅಂಗನವಾಡಿ ಕಾರ್ಯಕರ್ತೆಯರು ಮಾತ್ರವಲ್ಲ, ವೈದ್ಯರು ಕೂಡಾ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಪತ್ತೆ ಹಚ್ಚಬಹುದು. ಅಂತಹ ಮಕ್ಕಳ ಕುಟುಂಬದವರೊಂದಿಗೆ ಮಾತುಕತೆ ನಡೆಸಿ ಅವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಇದೊಂದು ಉತ್ತಮ ಬೆಳವಣಿಗೆಯಾಗಿದೆ. ಡಿಜಿಟಲೀಕರಣ ವ್ಯವಸ್ಥೆಯು ರಾಜ್ಯದಲ್ಲಿ ಹಲವು ಪ್ರಯೋಜನಗಳ ಸೃಷ್ಟಿಗೆ ಕೊಡುಗೆ ನೀಡಿದೆ ಎಂದು ಅಭಿಪ್ರಾಯಿಸಿದ್ದಾರೆ.
ಇನ್ನು ಮಹಿಳೆಯರ ಮೇಲಿನ ದೌರ್ಜನ್ಯ ತಡೆ ನಿಟ್ಟಿನಲ್ಲಿಯೂ ಸಕಾರಾತ್ಮಕ ಬದಲಾವಣೆಯ ಹಾದಿಯಲ್ಲಿ ರಾಜ್ಯ ನಡೆಯುತ್ತಿದೆ. ಒನ್ ಸ್ಟಾಪ್ ಸೆಂಟರ್ಗೆ (ಆಶಾಜ್ಯೋತಿ ಸೆಂಟರ್) ಭೇಟಿ ನೀಡುವ ಅವಕಾಶ ನನಗೆ ದೊರಕಿತು. ಹಿಂಸೆಗೊಳಗಾದ ಹಲವು ಮಹಿಳೆಯರನ್ನು ಭೇಟಿಯಾಗಿ ಅವರೊಂದಿಗೆ ಮಾತನಾಡಿದೆ. ಮಕ್ಕಳ ಶಿಕ್ಷಣ, ಕೋವಿಡ್ನಿಂದಾಗಿ ಅನಾಥರಾದ ಮಕ್ಕಳಿಗೆ ಇರುವ ಯೋಜನೆಗಳು ಶ್ಲಾಘನೀಯ ಎಂದರು.