ಗಾಂಧಿನಗರ, ನ 09 (DaijiworldNews/DB): ಸೆಮಿ ಹೈಸ್ಪೀಡ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಢಿಕ್ಕಿಯಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಗುಜರಾತ್ನ ಆನಂದ್ ಬಳಿ ಮಂಗಳವಾರ ಸಂಜೆ ನಡೆದಿದೆ.
ಮೃತ ಮಹಿಳೆಯನ್ನು ಅಹಮದಾಬಾದ್ ನಿವಾಸಿ ಬೀಟ್ರಿಸ್ ಆರ್ಚಿಬಾಲ್ಡ್ ಪೀಟರ್ ( 54) ಎಂದು ಗುರುತಿಸಲಾಗಿದೆ. ಮಹಿಳೆಯು ಹಳಿ ದಾಟುತ್ತಿದ್ದ ವೇಳೆ ಎದುರಿನಿಂದ ಬರುತ್ತಿದ್ದ ಸೆಮಿ ಹೈಸ್ಪೀಡ್ ರೈಲು ಢಿಕ್ಕಿಯಾಗಿದೆ.
ಈಕೆ ಆನಂದ್ನಲ್ಲಿರುವ ತಮ್ಮ ಸಂಬಂಧಿಕರನ್ನು ಭೇಟಿಯಾಗುವ ಸಲುವಾಗಿ ತೆರಳುತ್ತಿದ್ದರು. ರೈಲು ಗಾಂಧಿನಗರದಿಂದ ಮುಂಬೈ ಸೆಂಟ್ರಲ್ಗೆ ಪ್ರಯಾಣಿಸುತ್ತಿತ್ತು. ಆನಂದ್ ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ಗೆ ನಿಲುಗಡೆ ಇಲ್ಲ ಎಂದು ತಿಳಿದು ಬಂದಿದೆ.
ವಂದೇ ಭಾರತ್ ಎಕ್ಸ್ಪ್ರೆಸ್ಗೆ ಸೆಪ್ಟೆಂಬರ್ 30ರಂದು ಗಾಂಧೀನಗರ ರಾಜಧಾನಿ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಆರಂಭವಾದಂದಿನಿಂದಲೇ ಹಲವಾರು ಬಾರಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಅಪಘಾತದ ಕಾರಣಕ್ಕಾಗಿಯೇ ಸುದ್ದಿಯಾಗಿದೆ. ಅಕ್ಟೋಬರ್ನಲ್ಲಿ ಜಾನುವಾರುಗಳಿಗೆ ಮೂರು ಬಾರಿ ಢಿಕ್ಕಿ ಹೊಡೆದ ಘಟನೆ ನಡೆದಿತ್ತು.