ಮಹಾರಾಷ್ಟ್ರ, ನ 08 (DaijiworldNews/DB): ಭಾರತ್ ಜೋಡೋ ಯಾತ್ರೆಯಲ್ಲಿ ಸಾಗುತ್ತಿದ್ದಾಗಲೇ ಹೃದಯಾಘಾತಕ್ಕೊಳಗಾಗಿ ಕಾಂಗ್ರೆಸ್ ನಾಯಕರೊಬ್ಬರು ಮೃತಪಟ್ಟ ಘಟನೆ ಮಹಾರಾಷ್ಟ್ರದ ನಾಂದೇಡ್ನಲ್ಲಿ ಮಂಗಳವಾರ ನಡೆದಿದೆ.
ಕೃಷ್ಣ ಕುಮಾರ್ ಪಾಂಡೆ (75) ಮೃತಪಟ್ಟವರು. ಕಾಂಗ್ರೆಸ್ ಸೇವಾದಳದ ಪ್ರಧಾನ ಕಾರ್ಯದರ್ಶಿಯಾಗಿದ್ದ ಕೃಷ್ಣಕುಮಾರ್ ಪಾಂಡೆ ಅವರ ನಿಧನಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶ್ರದ್ದಾಂಜಲಿ ಸಲ್ಲಿಸಿದ್ದಾರೆ. ದೇಶಕ್ಕಾಗಿ ಪಾಂಡೆಯವರ ಸಮರ್ಪಣೆ ಯುವಕರಿಗೆ ಸ್ಪೂರ್ತಿ ನೀಡುತ್ತದೆ. ತಮ್ಮ ಕೊನೆಯ ಕ್ಷಣಗಳಲ್ಲಿ ಅವರು ರಾಷ್ಟ್ರಧ್ವಜ ಹಿಡಿದು ಸಾಗಿದ್ದರು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಇನ್ನು ಸಮರ್ಪಿತ ನಾಯಕನನ್ನು ಕಳೆದುಕೊಂಡಿರುವುದು ಪಕ್ಷಕ್ಕೆ ತುಂಬಲಾರದ ನಷ್ಟ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಪಾಂಡೆ ನಿಧನದ ಸುದ್ದಿಯನ್ನು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಪಕ್ಷದ ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದರು.
62ನೇ ದಿನದಲ್ಲಿ ಭಾರತ್ ಜೋಡೋ ಯಾತ್ರೆ ಸಾಗುತ್ತಿದೆ. ಇಂದು ಬೆಳಗ್ಗೆ ಕೃಷ್ಣಕುಮಾರ್ ಪಾಂಡೆ ಅವರು ರಾಷ್ಟ್ರಧ್ವಜ ಹಿಡಿದು ದಿಗ್ವಿಜಯ್ ಸಿಂಗ್ ಹಾಗೂ ನನ್ನೊಂದಿಗೆ ಹೆಜ್ಜೆ ಹಾಕುತ್ತಿದ್ದರು. ಸ್ವಲ್ಪ ಸಮಯದಲ್ಲಿ ಅವರು ಧ್ವಜವನ್ನು ಬೇರೆಯವರಿಗೆ ನೀಡಿ ಹಿಂದೆ ಸರಿದು ಕುಸಿದು ಬಿದ್ದರು. ತತ್ಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಸಾವನ್ನಪ್ಪಿದ್ದರು. ಕಟ್ಟರ್ ಕಾಂಗ್ರೆಸ್ಸಿಗರಾದ ಪಾಂಡೆ, ನಾಗಪುರದಲ್ಲಿ ಆರೆಸ್ಸೆಸ್ನ್ನು ಎದುರಿಸಿ ನಿಂತಿದ್ದರು ಎಂದು ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.