ಬೆಂಗಳೂರು, ನ 08 (DaijiworldNews/DB): ಹೃದಯಾಘಾತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಕನ್ನಡದ ಹಿರಿಯ ನಟ ಟಿ.ಎಸ್. ಲೋಹಿತಾಶ್ವ (80) ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ವಿಧಿವಶರಾಗಿದ್ದಾರೆ.
ಟಿ.ಎಸ್. ಲೋಹಿತಾಶ್ವ ಅವರಿಗೆ ಅ. 10 ರಂದು ಹೃದಯಾಘಾತವಾಗಿತ್ತು. ಹೀಗಾಗಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಸಾವನ್ನಪ್ಪಿದ್ದಾರೆ. ತುಮಕೂರಿನ ತೊಂಡಗೆರೆ ಮೂಲದ ಲೋಹಿತಾಶ್ವ ಅವರು, ಚಲನಚಿತ್ರ ರಂಗದಲ್ಲಿ ನಟರಾಗಿ, ನಾಟಕಕಾರರಾಗಿ ಗಮನ ಸೆಳೆದವರು. 500ಕ್ಕೂ ಅಧಿಕ ಕನ್ನಡ ಚಲನಚಿತ್ರ, ರಂಗನಾಟಕ ಮತ್ತು ದೂರದರ್ಶನ ಧಾರವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರಾದ ಅವರು ವಿಶಿಷ್ಟ ಕಂಠಸಿರಿಯನ್ನೂ ತಮ್ಮದಾಗಿಸಿಕೊಂಡಿದ್ದರು.
ಅಭಿಮನ್ಯು, ಎಕೆ 47, ಅವತಾರ ಪುರುಷ, ಚಿನ್ನ, ಹೊಸ ನೀರು, ಗಜೇಂದ್ರ, ವಿಶ್ವ, ಪ್ರತಾಪ್, ಪೊಲೀಸ್ ಲಾಕಪ್, ರೆಡಿಮೇಡ್ ಗಂಡ, ಸ್ನೇಹಲೋಕ, ಸುಂದರಕಾಂಡ, ಸಿಂಹದ ಮರಿ, ಮೂರು ಜನ್ಮ, ಸಾಂಗ್ಲಿಯಾನ, ಟೈಮ್ ಬಾಂಬ್, ಲಾಕಪ್ ಡೆತ್, ಸಂಭವಾಮಿ ಯುಗೇ ಯುಗೇ, ರಣಚಂಡಿ, ಸಮಯದ ಗೊಂಬೆ, ಸಂಗ್ರಾಮ, ನ್ಯೂ ಡೆಲ್ಲಿ, ಸಾರಥಿ ಸೇರಿದಂತೆ ಹಲವು ಪ್ರಸಿದ್ದ ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ಲೋಹಿತಾಶ್ವ ಅವರದ್ದು.